ಕಾಳಗಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿ: ಶಾಸಕ ಅವಿನಾಶ್ ಜಾಧವ ತಾಕೀತು
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ್ ತಾಕೀತು ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ 2025-26ನೇ ಸಾಲಿನ ಮುಂಬರುವ ಬೆಸೀಗೆಯ ಕುಡಿಯುವ ನೀರಿನ ಹಾಗೂ ಮೇವಿನ ಸಮಸ್ಯೆಗಳ ಬಗೆಹರಿಸುವ ಕುರಿತು ಹಮ್ಮಿಕೊಂಡ ಟಾಸ್ಕ್ ಫೋರ್ಸ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಳಗಿ ತಾಲೂಕಿನ ರುಮ್ಮನಗೂಡ, ವಜ್ಜರಗಾಂವ್, ಮೋಘಾ, ಹೊಸ್ಸಳ್ಳಿ(ಎಚ್), ರಟಕಲ್, ಕೊರವಿ ಗಾಂಧಿ ನಗರ ತಾಂಡಾ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಅರ್ಧಕ್ಕೆ ನಿಂತಿದೆ, ಕಳಪೆ ಗುಣಮಟ್ಟದಿಂದ ಕೂಡಿದೆ ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ, ಶೀಘ್ರದಲ್ಲೇ ಅರ್ಧಕ್ಕೆ ನಿಂತಿರುವ ಕಾಮಗಾರಿ ಗುಣಮಟ್ಟದಿಂದ ಪೂರ್ಣಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಖಡಕ್ಕಾಗಿ ಸೂಚಿಸಿದರು.
ಮತಕ್ಷೇತ್ರದ ಅಭಿವೃದ್ಧಿಗಾಗಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಗೋವನ್ನು ಬದಿಗಿಟ್ಟು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ತಾಲೂಕು ಕೃಷಿ ಅಧಿಕಾರಿ ಸಂಜೀವಕುಮಾರ ಮಾತನಾಡಿ, ಕಾಳಗಿ ತಾಲೂಕಿಗೆ 46 ಕೋಟಿ 68 ಲಕ್ಷ ರೂ. ಬೆಳೆ ವಿಮೆ ಮಂಜೂರಾಗಿದ್ದು 15,605 ರೈತರಿಗೆ ಒಂದು ವಾರದಲ್ಲಿ ಬೆಳೆ ವಿಮೆ ಹಣ ಅವರ ಖಾತೆಗೆ ಜಮೆ ಆಗಲಿದೆ ಎಂದು ಹೇಳಿದರು.
ಕಾಳಗಿ ಪಟ್ಟಣದ ಪಟ್ಟಣ ಪಂಚಾಯತಿಯಲ್ಲಿ ನಗರೋತ್ಥಾನ ಕಾಮಗಾರಿ ಕಳಪೆ ಹಾಗೂ ಅರ್ಧಕ್ಕೆ ಸ್ಥಗಿತಗೊಂಡಿರುವ ದೂರು ಬಂದಿದ್ದು ಅದನ್ನು ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಪಪಂ ಮುಖ್ಯಾಧಿಕಾರಿ ಪಂಕಜಾ ಅವರಿಗೆ ಸೂಚನೆ ನೀಡಿದರು.
ಕಾಳಗಿ ಪಟ್ಟಣ ಪಂಚಾಯತಿಗೆ 15ನೇ ಹಣಕಾಸು ಅನುದಾನ ಬಂದಿಲ್ಲ ಅದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತರುತ್ತಿದ್ದಂತೆ ಕೆಕೆಆರ್ ಡಿಬಿ ಯಿಂದ ಪಟ್ಟಣ ಪಂಚಾಯತಿಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.
ತಹಶಿಲ್ದಾರರ ಘಮಾವತಿ ರಾಠೋಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಸವಲಿಂಗಪ್ಪ ಡಿಗ್ಗಿ, ಕೃಷಿ ಅಧಿಕಾರಿ ಸಂಜೀವಕುಮಾರ, ಪಶುವೈದ್ಯ ಗೌತಮ ಕಾಂಬಳೆ, ಸಮುದಾಯ ಆರೋಗ್ಯ ಅಧಿಕಾರಿ ಡಾ. ಅಮರೇಶ ಎಮ್.ಎಚ್, ಪಪಂ ಮುಖ್ಯಾಧಿಕಾರಿ ಪಂಕಜಾ ಎ, ಗ್ರೇಡ್-2 ತಹಸೀಲ್ದಾರ್ ರಾಜೇಶ್ವರಿ, ಪಿಡ್ಲ್ಬೂಡಿ ಎಇಇ ಮಲ್ಲಿಕಾರ್ಜುನ ದಂಡಿನ, ಪಂಚಾಯತ್ ರಾಜ್, ಸಮಾಜ ಕಲ್ಯಾಣ ಇಲಾಖೆ, ಸಿಡಿಪಿಓ, ಜೆಜೆಎಂ ಅಧಿಕಾರಿಗಳು, ತಾಲೂಕಿನ ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.
“ತಾಲೂಕಿನ ಕೆಲ ಅತಿ ಶ್ಯಾಣೆ ಜನರು ನಾನು ಕಾಣೆಯಾಗಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಬಾಯಿ ಚಪಲಕ್ಕೆ ಮತ್ತು ಪ್ರಚಾರಕ್ಕಾಗಿ ನನ್ನ ವಿರುದ್ಧ ಸುಳ್ಳು ಆಪಾದನೆ ಮಾಡಿದ್ದಾರೆ, ನಾನು ಯಾವತ್ತೂ ಜನರ ಮದ್ಯೆ ಇದ್ದು ಕೆಲಸ ಮಾಡುತ್ತೇನೆ. ಆರೋಪ ಮಾಡಿದವರಿಗೆ ಸ್ವಲ್ಪ ಟ್ರಿಟಮೆಂಟ್ ಬೇಕಾಗಿದೆ ಮುಂಬರುವ ದಿನಗಳಲ್ಲಿ ಚಿಕಿತ್ಸೆ ನೀಡುವುದಿದೆ”-ಡಾ.ಅವಿನಾಶ್ ಜಾಧವ ಶಾಸಕರು ಚಿಂಚೋಳಿ.