ಯಾಗಾಪೂರ ಹಾಗೂ ಅಲ್ಲೂರು.ಬಿ ಗ್ರಾಮದ ಪ್ರಸ್ತಾವಿತ ಸಂರಕ್ಷಣಾ ಮೀಸಲು ಅರಣ್ಯ ಪ್ರದೇಶದಕ್ಕೆ ಜಿಲ್ಲಾಧಿಕಾರಿ ಭೇಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಯಾಗಾಪೂರ ಹಾಗೂ ಅಲ್ಲೂರು.ಬಿ ಗ್ರಾಮದ ಪ್ರಸ್ತಾವಿತ ಸಂರಕ್ಷಣಾ ಮೀಸಲು ಅರಣ್ಯ ಪ್ರದೇಶದ ಅಭಿವೃದ್ಧಿ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್ ಭೇಟಿ ನೀಡಿದ್ದಾರೆ.
ಗುರುವಾರ ಭೇಟಿ ನೀಡಿ ಹಾಗೂ ಪರೀಶೀಲನೆ ನಡೆಸಿದ ಜಿಲ್ಲಾಧಿಕಾರಿ, ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ ಅಂತಹವರಿಗೆ ತಿಳುವಳಿಕೆ ನೀಡಿ ಅಥವಾ ಗ್ರಾಮಸಭೆ ನಡೆಸಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಶಿವನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭಾಷೆ ಕಲಿಕೆಯ ಗುಣಮಟ್ಟ ಹಾಗೂ ಬಿಸಿಯೂಟ ಪರೀಕ್ಷಿಸಿ ಕೆಲ ಹೊತ್ತು ಮಕ್ಕಳೊಂದಿಗೆ ಸಮಯ ಕಳೆದರು.
ಇದಕ್ಕೂ ಮುನ್ನ ಚಿತ್ತಾಪುರ ತಾಲೂಕಿನ ಮಾಡಬೂಳ ಮೃಗಾಲಯಕ್ಕೆ ಭೇಟಿ ಹಾಗೂ ಗುಂಡುಗುರ್ತಿ ಗ್ರಾಮದ ಟ್ರೀ ಪಾರ್ಕ್ ಗೆ ಭೇಟಿ ಹಾಗೂ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದ ಟ್ರೀ ಪಾರ್ಕ್ ಗೆ ಭೇಟಿ ಹಾಗೂ ಪರೀಶೀಲನೆ ಹಾಗೂ ಕಪನೂರ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ಪಟಾಕಿ ಅಂಗಡಿ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವ ಕುರಿತು ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ಡಿಸಿಎಫ್ ಸುಮೀತ್ ಕುಮಾರ್ ಪಾಟೀಲ್, ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ಸೇರಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

