ದಂಡೋತಿ ಗ್ರಾಮದಲ್ಲಿ ಮಂಗನ ದಾಳಿ | ನಾಲ್ವರಿಗೆ ಗಂಭೀರ ಗಾಯ, ಅರಣ್ಯಾಧಿಕಾರಿಗಳು ಭೇಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಲ್ಲಿ ಮಂಗವೊಂದು ದಾಳಿ ಮಾಡಿ ನಾಲ್ಕು ಜನರಿಗೆ ಗಂಭೀರವಾಗಿ ಗಾಯಗೊಳಿಸಿದ ಘಟನೆ ಗುರುವಾರ ನಡೆದಿದೆ.
ಮಂಗನ ದಾಳಿಗೆ ಗ್ರಾಮದ ನೀಲಮ್ಮ ದತ್ತು ಹೂಗಾರ, ವೀರಶೆಟ್ಟಿ ಪ್ರಕಾಶ, ಮಹ್ಮದ್ ಫಾರೂಕ್ ಗೌಸ್ ಪಟೇಲ್, ಮಾಲಮ್ಮ ಚಿಮ್ಮನ್ ಅವರು ಗಂಭೀರ ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಂಗ ಹಿಡಿಯುವ ಕಾರ್ಯಾಚರಣೆ ನಡೆಸಿದ್ದಾರೆ ಆದರೆ ಮಂಗ ಮಾತ್ರ ಇನ್ನೂ ಸಿಕ್ಕಿಲ್ಲ ಇದರಿಂದ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಮಂಗನ ದಾಳಿಯಿಂದ ಗಾಯಗೊಂಡಿರುವವರನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ತಾಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ತಿಳಿಸಿದ್ದಾರೆ.
ಗ್ರಾಮದಲ್ಲಿ 15 ರಿಂದ 20 ಮಂಗಗಳಿವೆ ಆದರೆ ಈ ಪೈಕಿ ಮಂಗವೊಂದಕ್ಕೆ ಯಾರೋ ಹೊಡಿದಿದ್ದಾರೆ ಹೀಗಾಗಿ ಅದು ಸಿಟ್ಟಾಗಿ ಜನರ ಮೇಲೆ ದಾಳಿ ಮಾಡಿರಬಹುದು ಅಥವಾ ಮಂಗಕ್ಕೆ ಹುಚ್ಚು ಹಿಡಿದಿರಬಹುದು. ಹೀಗಾಗಿ ದಾಳಿ ಮಾಡಿ ಕಚ್ಚುತ್ತಿದೆ ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮಂಗಗಳ ಉಪಟಳದಿಂದ ಗ್ರಾಮಸ್ಥರು, ಮಕ್ಕಳು, ಮಹಿಳೆಯರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಹಾಗೂ ಭಯದಲ್ಲಿ ಓಡಾಡುವಂತೆ ಆಗಿದೆ ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಹುಚ್ಚೆದ್ದು ಅಲೆಯುತ್ತಿರುವ ಮಂಗಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಕೋಲಿ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಸಾಬಣ್ಣ ಭರಾಟೆ ಆಗ್ರಹಿಸಿದ್ದಾರೆ.
“ದಂಡೋತಿಯಲ್ಲಿ ಮಂಗನ ದಾಳಿಗೆ ಗಾಯಗೊಂಡ ನಾಲ್ಕು ಜನರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರದ ವತಿಯಿಂದ ಸಿಗುವ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮಂಗನ ಸೆರೆ ಹಿಡಿಯಲು ಈಗಾಗಲೇ ಕಾರ್ಯಾಚರಣೆ ಕೈಗೊಳ್ಳಲಾಗಿದೆ, ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ”.-ವಿಜಯಕುಮಾರ್ ಬಡಿಗೇರ್ ಅರಣ್ಯಾಧಿಕಾರಿ ಚಿತ್ತಾಪುರ.

