ಡಿವೈನ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಂಸ್ಥೆಯಿಂದ 200 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ | 371 (ಜೆ) ಸೌಲಭ್ಯ ಪಡೆದು ಶಿಕ್ಷಣದಲ್ಲಿ ಸಾಧನೆಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ರಂಗದಲ್ಲಿ 371( ಜೆ) ಸೌಲಭ್ಯ ಪಡೆದು ವಿಶೇಷ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದೆ. ಈ ಭಾಗದ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಮತ್ತು ಸಾಧನೆಯನ್ನು ಮಾಡಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ ನೀಡಿದರು.
ನಗರದ ರಂಗಮಂದಿರದಲ್ಲಿ ನಡೆದ ಡಿವೈನ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ನ 200 ಪದವೀಧರರಿಗೆ ಪ್ರಮಾಣ ಪತ್ರ ಪ್ರದಾನ ಮಾಡಿ ಮಾತನಾಡಿದ ಅವರು, ಸಂವಿಧಾನದ 371 (ಜೆ) ಕಲಂ ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳಲ್ಲಿ ಸೌಲಭ್ಯ ಪಡೆಯುತ್ತಿರುವುದು ಶ್ಲಾಘನೀಯವಾಗಿದೆ. ನರ್ಸಿಂಗ್ ಕೋರ್ಸ್ ಬಹುಬೇಡಿಕೆಯ ಕೋರ್ಸ್ ಆಗಿದ್ದು ಉದ್ಯೋಗ ಹೊಂದಲು ದೇಶವಿದೇಶಗಳಲ್ಲಿ ವ್ಯಾಪಕ ಬೇಡಿಕೆ ಇದೆ ಎಂದು ತಿಳಿಸಿದರು.
ಡಿವೈನ್ ಸಂಸ್ಥೆಯ ಅಧ್ಯಕ್ಷ ಡಾ. ಕಿರಣ್ ಜಾರ್ಜ್ ನರ್ಸಿಂಗ್ ಸಂಸ್ಥೆಯನ್ನು ಪ್ರಾರಂಭಿಸಿ ಈ ಭಾಗದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನರ್ಸಿಂಗ್ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯದ ಸೇವೆಯ ಅಂಗವಾಗಿ ಬಡವರಿಗೆ ಅನ್ನದಾನ ಉಚಿತ ನರ್ಸಿಂಗ್ ಶಿಕ್ಷಣ 41 ಬಾರಿ ರಕ್ತದಾನ 33 ಬಾರಿ ರಕ್ತದಾನ ಶಿಬಿರ ಆಯೋಜನೆ ಕಂಬಳಿ ವಿತರಣೆ ಸೇರಿದಂತೆ ಸಮಾಜ ಸೇವೆ ಸಲ್ಲಿಸುತ್ತಿರುವುದು ಕೂಡ ಸ್ತುತ್ಯಾರ್ಹ ಎಂದರು.
ರಾಜ್ಯ ನರ್ಸಿಂಗ್ ಬೋರ್ಡಿನ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಉಪಮೇಯರ್ ತೃಪ್ತಿ ಲಾಖೆ, ಕೆಕೆಆರ್ಡಿಬಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ನ್ಯಾಯವಾದಿ ವಸಂತ್ ಪ್ರತಿಪಥಿ, ಫಾ. ರಾಬರ್ಟ್ ರಾಡ್ರಿಗಸ್, ಫಾ.ಪ್ರವೀಣ್, ಫಾ.ರೊನಾಲ್ಡ್, ರವೀಂದ್ರ ಶಾಬಾದಿ, ಸಂಧ್ಯಾರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

