ಚಿತ್ತಾಪುರ ಬೆಳೆ ಸಮೀಕ್ಷೆ ಗೊಂದಲ | ಅಧಿಕಾರಿಗಳ ತಪ್ಪಿನಿಂದ ರೈತರಿಗೆ ಅನ್ಯಾಯ: ಜಗದೀಶ ಸಾಗರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಸ.ನಂ.193/2 ರಲ್ಲಿ ವಿಸ್ತೀರ್ಣ 04 ಎಕರೆ 19 ಗುಂಟೆ ಜಮೀನಿನ ಗೇಣಿ ಮತ್ತು ಪಹಣಿ ಪತ್ರಿಕೆಯಲ್ಲಿ ಬೆಳೆ ಕಾಲಂ ನಂ.9 ರಲ್ಲಿ ಬೆಳೆ ಸಮೀಕ್ಷೆ ಗ್ರಾಮ ಆಡಳಿತ ಅಧಿಕಾರಿಗಳ ತಪ್ಪಿನಿಂದ ಬೆಳೆ ಕಾಲಂ ನಂ.9 ರಲ್ಲಿ ಮರಗೆಣಸು ಎಂದು ನಮೂದು ಮಾಡಿದ್ದು ರೈತರಿಗೆ ಪರಿಹಾರದ ಹಣ ಮತ್ತು ಇನ್ಸೂರೆನ್ಸ್ ಹಣ ಬರದ ಹಾಗೆ ರೈತರಿಗೆ ಅನ್ಯಾಯ ಆಗುತ್ತಿದೆ. ಈ ಕೂಡಲೇ ಇದನ್ನು ಸರಿಪಡಿಸಿ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಎಸ್.ಸಾಗರ ಆಗ್ರಹಿಸಿದರು.
ಈ ಕುರಿತು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ತಾಲೂಕಿನ ದಂಡೋತಿ ಗ್ರಾಮದ ಸ.ನಂ.193/2 ರಲ್ಲಿ ವಿಸ್ತೀರ್ಣ 04 ಎಕರೆ 19 ಗುಂಟೆ ಜಮೀನಿನಲ್ಲಿ ಬೆಳೆ ಕಾಲಂ ನಂ.9 ರಲ್ಲಿ ಮರಗೆಣಸು ನಮೂದಾಗಿರುವುದನ್ನು ತೆಗೆದು ಹಾಕಿ ಸದರಿ ಜಮೀನಿನಲ್ಲಿ ತೊಗರಿ ಬೆಳೆ ನಮೂದಿಸಬೇಕಾಗಿತ್ತು, ಆದರೆ ಇದರಂತೆ ಇನ್ನು ಮೂರು ನಾಲ್ಕು ಜಮೀನಿನಲ್ಲಿ ಇದೇ ರೀತಿಯಾಗಿ ಬಂದಿರುತ್ತದೆ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಪೋನ್ ಮಾಡಿ ಕೇಳಿದಾಗ ಹಾರಿಕೆ ಉತ್ತರ ಕೊಡುತ್ತಿದ್ದಾರೆ ಎಂದು ಹೇಳಿದರು.
ವಿಪರೀತ ಅತಿವೃಷ್ಠಿಯಿಂದ ಹಾಳಾದ ಬೆಳೆಗೆ ಸರ್ಕಾರದಿಂದ ಪರಿಹಾರ ಹೇಗೆ ಪಡೆದುಕೊಳ್ಳಬೇಕು ಮತ್ತು ಇಂತಹ ಅಧಿಕಾರಿಗಳಿಂದ ಆಮಾಯಕ ರೈತರಿಗೆ ಮೋಸ ಆಗುತ್ತಿದೆ. ಇದಲ್ಲದೆ ಕಾಲಂ ನಂ.9 ರಲ್ಲಿ ಬಂದಿರುವ ಮರಗೆಣಸು ತೆಗೆಯಲು ಬರುವುದಿಲ್ಲವೆಂದು ಹೇಳುತ್ತಿದ್ದಾರೆ. ಆದ್ದರಿಂದ ಈಕಡೆ ಗಮನ ಹರಿಸಿ ಮರು ಸಮೀಕ್ಷೆ ಮಾಡಿ ವರದಿ ಪಡೆದುಕೊಂಡು ಬಡ ಮತ್ತು ಅಮಾಯಕ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು, ಒಂದು ವೇಳೆ ಇದಕ್ಕೆ ನಿರ್ಲಕ್ಷ್ಯ ತೋರಿದಲ್ಲಿ ಬರುವ ದಿನದಲ್ಲಿ ತೆಂಗಳಿ ಕ್ರಾಸ್ನಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಜಿ.ಜಳಕಿ, ರೈತ ಮುಖಂಡರಾದ ಹಣಮಂತರಾಯ ಯಾಕಾಪೂರ, ದೊಡ್ಡಪ್ಪ ಮಳಖೇಡ, ಕರವೇ ಅಧ್ಯಕ್ಷ ನರಹರಿ ಕುಲಕರ್ಣಿ ಇದ್ದರು.

