ಪೂರ್ವಭಾವಿ ಸಭೆಯಲ್ಲಿ ಘೋಷಣೆ | ಚಿತ್ತಾಪುರ ಬಸವ ಜಯಂತಿ ಸಮಿತಿಯ ಅಧ್ಯಕ್ಷರಾಗಿ ಬಸವರಾಜ ಪಾಟೀಲ ಬೆಳಗುಂಪಾ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಶರಣಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಸವ ಜಯಂತಿ ನಿಮಿತ್ತ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಉದ್ಯಮಿ ಬಸವರಾಜ ಪಾಟೀಲ ಬೆಳಗುಂಪಾ ಅವರನ್ನು ಬಸವ ಜಯಂತಿ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಘೋಷಣೆ ಮಾಡಿದ್ದಾರೆ.
ಏಪ್ರಿಲ್ 20 ರಂದು ತಹಸೀಲ್ ಕಚೇರಿಯಿಂದ ಬೆಳಗ್ಗೆ 10 ಗಂಟೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆಯು ಆರಂಭಗೊಂಡು ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಚಿತ್ತಾವಲಿ ವೃತ್ತದ ಮೂಲಕ ಹೋಳಿಕಟ್ಟಿ ಬಡಾವಣೆಯ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ನಂತರ ಪಾಲಪ್ ಗಲ್ಲಿ, ಕೇಳಗೇರಿ ರಸ್ತೆ, ಭುವನೇಶ್ವರ ವೃತ್ತ, ಅಂಬೇಡ್ಕರ ವೃತ್ತ, ಬಸ್ ನಿಲ್ದಾಣ ರಸ್ತೆಯ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿ, ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಯು ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬಸವ ಜಯಂತಿಯನ್ನು ಭಕ್ತಿಭಾವದಿಂದ, ವಿಜೃಂಭಣೆಯಿಂದ ನಡೆಸಲಾಗುವುದು. ಹೀಗಾಗಿ ಸಮಾಜದ ಜನರು, ಬಸವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಮಹಾಸಭಾದ ಗೌರವಾಧ್ಯಕ್ಷ ಲಿಂಗಾರೆಡ್ಡಿ ಬಾಸಾರೆಡ್ಡಿ ನಾಲವಾರ, ನಗರಾಧ್ಯಕ್ಷ ಚಂದ್ರಶೇಖರ ಉಟಗೂರ್, ಯುವ ಅಧ್ಯಕ್ಷ ಅನಿಲ್ ವಡ್ಡಡಗಿ, ಸಮಾಜದ ಹಿರಿಯ ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಸೋಮಶೇಖರ್ ಪಾಟೀಲ ಬೆಳಗಂಪಾ, ಚಂದ್ರಶೇಖರ್ ಟೆಂಗಳಿ, ಡಾ. ಪ್ರಭುರಾಜ ಕಾಂತಾ, ಅಣ್ಣಾರಾವ್ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಮಲ್ಲರೆಡ್ಡಿ ಗೋಪಸೇನ್, ಓಂಕಾರ ರೇಷ್ಮಿ, ರವೀಂದ್ರ ಸಜ್ಜನಶೆಟ್ಟಿ, ಶಾಂತಪ್ಪ ಚಾಳಿಕಾರ, ಆನಂದ್ ಪಾಟೀಲ ನರಿಬೋಳ, ಸೇರಿದಂತೆ ಸಮಾಜದ ಹಿರಿಯ ಮುಖಂಡರು ಯುವಕರು ಬಸವ ಅಭಿಮಾನಿಗಳು ಇದ್ದರು.
ಈ ಸಂದರ್ಭದಲ್ಲಿ ಬಸವ ಜಯಂತಿ ಸಮಿತಿಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಬಸವರಾಜ ಪಾಟೀಲ ಬೆಳಗುಂಪಾ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂತೋಷ ಹಾವೇರಿ ನಿರೂಪಿಸಿದರು.

