ಕಲಬುರಗಿ ಹಿಂದುಳಿದ ವರ್ಗಗಳ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯಕ್ಕೆ ಎಂಎಲ್ಸಿ ಡಾ. ತಳವಾರ ಸಾಬಣ್ಣಾ ಭೇಟಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ನಗರದ ಶಹಾಬಾದ ರಸ್ತೆಯಲ್ಲಿರುವ ಕಲ್ಯಾಣ ನಗರದ ಹಿಂದುಳಿದ ವರ್ಗಗಳ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣಾ ಅವರು ಶುಕ್ರವಾರ ಭೇಟಿ ನೀಡಿ ಹಾಸ್ಟೆಲ್ ಅವ್ಯವಸ್ಥೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿದರು.
ವಿದ್ಯಾರ್ಥಿಗಳು ಹಾಸ್ಟೆಲ್ ದುರಾವಸ್ಥೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು. ಹಾಸ್ಟೆಲ್ ನಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ, ಹಾಸ್ಟೆಲ್ ಸ್ನಾನಗೃಹ, ಶೌಚಾಲಯಗಳು ಮನುಷ್ಯರು ಉಪಯೋಗ ಮಾಡದಂತ ಸ್ಥಿತಿಯಲ್ಲಿದೆ. ಶೌಚಾಲಯ ಮತ್ತು ಸ್ನಾನದ ಕೋಣೆಗಳಲ್ಲಿ ನೀರು ತುಂಬಿಕೊಂಡು ಹೊಲಸು ಕೋಣೆಯಲ್ಲಿಯೇ ಉಳಿದು ದುರ್ವಾಸನೆ ಬರುತ್ತಿದೆ. ಅಡುಗೆ ಕೋಣೆಯ ಆಹಾರ ಯಾವಾಗಲೊ ಮಾಡಿ ಇಡಲಾಗಿದೆ ಮತ್ತು ಆಹಾರ ಗುಣಮಟ್ಟದಿಂದ ಕೂಡಿಲ್ಲ. ಹಾಸ್ಟೆಲ್ ಅಡುಗೆ ಕೋಣೆಯ ಪಕ್ಕದಲ್ಲಿಯೇ ಗಟಾರಾ (ಚರಂಡಿ ನೀರು ನಿಂತು ಕೆಟ್ಟ ವಾಸನೆ ಬರುತ್ತಿದೆ) ತುಂಬಿಕೊಂಡು ದುರ್ವಾಸನೆ ಬರುತ್ತಿದೆ. ಈ ಸ್ಥಳದಲ್ಲಿ ವಿದ್ಯಾರ್ಥಿಗಳು ಊಟ ಮಾಡುವ ಭೀಕರ ಪರಿಸ್ಥಿತಿ ಈ ಹಾಸ್ಟೆಲ್ ನಲ್ಲಿ ಇದೆ. ಹಾಸ್ಟೆಲ್ ಕಾರಿಡಾರಿನಲ್ಲಿ ಊಟ ಮಾಡಿ ಎಲ್ಲಾ ಕಡೆ ತಟ್ಟೆಯಲ್ಲಿ ಆಹಾರ ಬಿಡಲಾಗಿದೆ. ಇದರಿಂದ ಕಾರಿಡಾರ ಹೊಲಸಾಗಿ ಗಬ್ಬು ನಾರುತ್ತಿದೆ. ಹಾಸ್ಟೆಲ್ ನ ಕಾಯಂ ಸಿಬ್ಬಂದಿಗಳು ತಮ್ಮ ಬದಲು ಬೇರೆ ಜನರಿಗೆ ದುಡ್ಡು ಕೊಟ್ಟು ಕೆಲಸ ಮಾಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಒಟ್ಟಾರೆ ಈ ಎಲ್ಲಾ ಸಮಸ್ಯೆಗಳಿಂದ ಹಾಸ್ಟೆಲ್ ನಲ್ಲಿ ಗುಣಮಟ್ಟ ಇಲ್ಲವಾಗಿದೆ. ಈ ಹಾಸ್ಟೆಲ್ ನ ಅವ್ಯವಸ್ಥೆಗಳನ್ನು ಸ್ವತಃ ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣಾ ಅವರು ವೀಕ್ಷಿಸಿ ಸಮಸ್ಯೆಯನ್ನು ಒಂದು ವಾರದೊಳಗೆ ಸುಧಾರಿಸಬೇಕೆಂದು ವಾರ್ಡನ್ ಗೆ ಎಚ್ಚರಿಸಿದರು. ಈ ಸಮಸ್ಯೆ ಸುಧಾರಣೆಯಾಗದ್ದಿದ್ದರೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ಸೂಚನೆ ನೀಡಿದರು.

