ಪಂಚಾಕ್ಷರ ಘರಾನಾ ಸಾಂಸ್ಕೃತಿಕೋತ್ಸವ, ವಿಶ್ವಗಾನ ಉಭಯ ರತ್ನ ಪ್ರಶಸ್ತಿ ಪ್ರದಾನ | ಗುರು ಶಿಷ್ಯ ಪರಂಪರೆಯ ವಿಶಿಷ್ಟ ಶೈಲಿಯ ಸಂಗೀತವೇ ಘರಾನಾ: ಶೇರಿಕಾರ್
ನಾಗಾವಿ ಎಕ್ಸಪ್ರೆಸ್
ಕಾಳಗಿ: ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ 11 ಪ್ರಮುಖ ಘರಾನಾಗಳನ್ನು ಗುರುತಿಸಲಾಗಿದೆ. ಇವುಗಳಲ್ಲೆವು ಉತ್ತರ ಭಾರತದ ನಗರಗಳ ಹೆಸರುಗಳಿಂದ ಕರೆಯಲಾಗುತ್ತಿದೆ. ಘರಾನಾ ಎಂಬುದು ಗುರು ಶಿಷ್ಯ ಪರಂಪರೆಯ ವಿಶಿಷ್ಟ ಸಂಗೀತ ಶೈಲಿಯಾಗಿದೆ ಎಂದು ಪತ್ರಕರ್ತ ಜಗನ್ನಾಥ ಶೇರಿಕಾರ್ ಹೇಳಿದರು.
ಅವರು ತಾಲೂಕಿನ ಕೋಡ್ಲಿಯ ರೇವಣಸಿದ್ದೇಶ್ವರ ಹಿರೇಮಠದಲ್ಲಿ ಶ್ರೀ ಗಾನಯೋಗಿ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಂಘ ಚಂದಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪಂಚಾಕ್ಷರ ಘರಾನಾ ಸಾಂಸ್ಕೃತಿಕೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸಂಗೀತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಜೀವನದ ಕಷ್ಟ ಸುಖಗಳಲ್ಲಿ ಸಂಗೀತಕ್ಕೆ ವಿಶೇಷ ಮಹತ್ವವಿದೆ. ಅಂತೆಯೇ ಪ್ರತಿಯೊಬ್ಬರು ಸಂಗೀತ ಆರಾಧಿಸುವುದು ಕಾಣುತ್ತೇವೆ. ಇಂದಿನ ದಿನಗಳಲ್ಲಿ ಒತ್ತಡ ರಹಿತ ಜೀವನಕ್ಕೆ ಸಂಗೀತ ದಿವ್ಯೌಷಧವಾಗಿದೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಲಿಂಗಾರೆಡ್ಡಿ ದೇಶಮುಖ ಉದ್ಘಾಟಿಸಿದರು. ಸಮಾರಂಭದಲ್ಲಿ ಗದಗನ ವಿದ್ವಾನ್ ಸುರೇಶ ಎಸ್ ಮಂಗಳೂರು ಮತ್ತು ಗದಗನ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರಿ ಗವಾಯಿಗಳ ಸಂಗೀತ ಪಾಠ ಶಾಲೆಯ ಶಿಕ್ಷಕ ರಾವುತಪ್ಪ ಎಂ. ಹೂಗಾರ ಅವರಿಗೆ ವಿಶ್ವಗಾನ ಉಭಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಬಸವಲಿಂಗ ಹಿರೇಮಠ ವಹಿಸಿದ್ದರು. ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ, ವಚನ ಕಂಠಪಾಠ ಸ್ಪರ್ಧೆ ವಿಜೇತ ಜಗದೀಶ ಮರಪಳ್ಳಿ, ರೇಣುಕಾಚಾರ್ಯ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸಂಗಯ್ಯಸ್ವಾಮಿ ಅಣವಾರ, ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ಪಿಕೆಪಿಎಸ್ ಅಧ್ಯಕ್ಷ ಅಣ್ಣಾರಾವ್ ಪೆದ್ದಿ, ಮಲ್ಲಿಕಾರ್ಜುನ ಸಪೈಗೋಳ್ ಮೊದಲಾದವರು ಇದ್ದರು.
ಸಂಗೀತ ಕಲಾವಿದರಾದ ಬಳೂಟಗಿಯ ಸಿದ್ದೇಶ್ವರ ಶಾಸ್ತ್ರಿಗಳು, ಸುರೇಶ ಎಸ್ ಮಂಗಳೂರು, ಪುಷ್ಪಲತಾ ಹಿರೇಮಠ, ಮಡಿವಾಳಯ್ಯ ಸಾಲಿ, ರೇವಣಸಿದ್ದಯ್ಯ ಹಿರೇಮಠ, ದಯಾನಂದ ಹಿರೇಮಠ, ಶಿವರಾಜ ಮುರುಡಾ, ಗಣಪತರಾವ್ ಸಿಂಗಶೆಟ್ಟಿ, ಮಲ್ಲಿಕಾರ್ಜುನ ದೇವಗಿರಿ, ಸಿದ್ದಲಿಂಗಯ್ಯ ಎಚ್ಬಿಎಲ್ ತಂಡ, ಗುರುಕುಮಾರ ಹಿರೇಮಠ, ಗದಗನ ಪಂಚಾಕ್ಷರಿ, ಶಾಂತವೀರ ಗುಂಡಪ್ಪ ಶಿವಯೋಗಿ ಅವರು ಸೇರಿದಂತೆ ವಿವಿಧ ಕಲಾ ತಂಡಗಳಿಂದ ಸಂಗೀತ ಸುಧೇ ಹರಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಬಸವರಾಜ ಸುಲೇಪೇಟ, ಮಂಗಳಾ ಮಲ್ಲಿಕಾರ್ಜುನ ಕನ್ನಡಗಿ ಅವರಿಂದ ಭಜನೆ ನಡೆಸಲಾಯಿತು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಐನೋಳ್ಳಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಪುಷ್ಪಲತಾ ಹಿರೇಮಠ ನಿರೂಪಿಸಿದರು, ಸಿದ್ದಲಿಂಗೇಶ್ ಆರ್ ಎಚ್ ವಂದಿಸಿದರು.
“ಉತ್ತರ ಭಾರತದ ಪ್ರಮುಖ 11 ಘರಾನಾಗಳಿಗೆ ಶಿಷ್ಯ ಸಂಕುಲ ಸೀಮಿತವಾದರೆ, ಪಂಚಾಕ್ಷರ ಘರಾನಾಕ್ಕೆ ಸಹಸ್ರಾರು ಸಂಖ್ಯೆಯ ಶಿಷ್ಯ ಪರಂಪರೆ ಹೊಂದಿದೆ ಇದು ಕನ್ನಡ ನಾಡಿನ ಹೆಮ್ಮೆಯಾಗಿದೆ”.-ರೇವಣಸಿದ್ದಯ್ಯ ಹಿರೇಮಠ ಸಂಗೀತ ಕಲಾವಿದರು, ಚಿಂಚೋಳಿ.
“ಕನ್ನಡ ಅತ್ಯಂತ ಶ್ರೀಮಂತ ಸಂಸ್ಕೃತಿ ಮತ್ತು ಸಾಹಿತ್ಯ ಎನಿಸಿರುವ ವಚನ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡಿ ವೇದಿಕೆಗಳಲ್ಲಿ ವಚನಗಳನ್ನು ಹಾಡುವ ಪರಂಪರೆ ಆರಂಭಿಸಿದ ಹಿರಿಮೆ ಪಂಚಾಕ್ಷರ ಗವಾಯಿಗಳಿಗೆ ಸಲ್ಲುತ್ತದೆ”.-ಬಸವಲಿಂಗ ಶಿವಾಚಾರ್ಯರು ಪೀಠಾಧಿಪತಿಗಳು, ರೇವಣಸಿದ್ದೇಶ್ವರ ಹಿರೇಮಠ ಕೋಡ್ಲಿ.

