ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ವಜಾ ಮಾಡಲು ಎನ್.ರವಿಕುಮಾರ್ ಆಗ್ರಹ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಸಂವಿಧಾನ ಹತ್ತಿಕ್ಕಿ, ಪ್ರಜಾಪ್ರಭುತ್ವ ಮೂಲೆಗುಂಪು ಮಾಡಿ ಸರ್ವಾಧಿಕಾರ ಮೆರೆಯುವ ಪ್ರಿಯಾಂಕ್ ಖರ್ಗೆಯವರು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರ ಹಕ್ಕುಚ್ಯುತಿ ಮಾಡಿದ್ದಾರೆ. ಅವರಿಗೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಪ್ರಿಯಾಂಕ್ ಖರ್ಗೆಯವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಛಲವಾದಿ ನಾರಾಯಣಸ್ವಾಮಿ ಅವರು ಚಿತ್ತಾಪುರಕ್ಕೆ ಹೋಗಿದ್ದಾಗ 5 ಗಂಟೆ ಕಾಲ ಪ್ರವಾಸಿ ಮಂದಿರದಲ್ಲಿ ಕೂಡಿ ಹಾಕಿದ್ದರು. ಅವರಿಗೆ ಕಿರುಕುಳ ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ಪ್ರಿಯಾಂಕ್ ಖರ್ಗೆ ಅವರ ಚೇಲಾಗಳು ನಾರಾಯಣಸ್ವಾಮಿ ಅವರ ವಿರುದ್ಧ ಘೋಷಣೆ ಕೂಗುತ್ತ, ಛಲವಾದಿಯವರ ಕಾರಿಗೆ ನೀಲಿ ಬಣ್ಣ ಸುರುವಿದ್ದಾರೆ. ನಾರಾಯಣಸ್ವಾಮಿ ಅವರ ಮುಖಕ್ಕೆ ಕಪ್ಪು ಬಣ್ಣ ಬಳಿಯಲು ಬಂದಿದ್ದರು ಎಂದು ಆರೋಪಿಸಿದರು. ನಾರಾಯಣಸ್ವಾಮಿ ಅವರಿಗೆ ಹೊಡೆಯಲು ಮೊಟ್ಟೆ, ಕಲ್ಲುಗಳನ್ನು ತಂದಿದ್ದರು ಎಂದು ವಿವರಿಸಿದರು.
ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ನಿನ್ನೆ ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಅಲ್ಲದೇ, ಸರಕಾರದ ವಿರುದ್ಧ ಚಾರ್ಜ್ಶೀಟ್ ಬಿಡುಗಡೆ ಮಾಡಿದ್ದರು ಎಂದರು. ಆಗ ಛಲವಾದಿ ನಾರಾಯಣಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯವರನ್ನು ವಿಷ ಸರ್ಪ ಎಂದು ಕರೆದಿದ್ದನ್ನು ತಿಳಿಸಿದ್ದರು. ನಾವು ಖರ್ಗೆಯವರನ್ನು ಸ್ವಲ್ಪ ಟೀಕಿಸಿದರೆ ದಲಿತರಿಗೆ ಅಪಮಾನ ಮಾಡಿದ್ದಾರೆ ಎನ್ನುತ್ತಾರೆ ಎಂದಿದ್ದಾಗಿ ಗಮನ ಸೆಳೆದರು.