ಶಹಾಬಾದ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಪ್ರತಿಭಟನಾ ಧರಣಿ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಯಾವುದೇ ಸರಕಾರ ಒಬ್ಬ ವ್ಯಕ್ತಿ ಎಷ್ಟು ಭೂಮಿಯನ್ನು ಹೊಂದಬೇಕು ಮತ್ತು ಅದಕ್ಕಿಂತ ಹೆಚ್ಚಿನ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡಬೇಕು ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರರು ಹೇಳಿದ್ದರು ಹಾಗೆ ಪಿಟಿಸಿಎಲ್ ಪ್ರಕರಣಗಳನ್ನು ಸುಪ್ರಿಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಕೆಯಾಗಲಿ ಎಂದು ಜಿಲ್ಲಾ ಸಂ.ಸಂಚಾಲಕ ಸತೀಶ ಕೋಬಾಳಕರ ಒತ್ತಿ ಹೇಳಿದರು.
ಆದರೆ ಇಂದು ಎಲ್ಲವೂ ನಮಗೆ ಇರಲಿ ಎನ್ನುವಂತೆ ದೊಡ್ಡ ದೊಡ್ಡ ಬಂಡವಾಳಶಾಹಿಗಳು ಎಲ್ಲ ಭೂಮಿಯನ್ನು ನುಂಗುತ್ತಿದ್ದು, ಇದರಿಂದ ದಲಿತರಿಗೆ ಭೂಮಿ ಇಲ್ಲದಂತಾಗಿದೆ, ಇದನ್ನು ವಿರೋಧಿಸಿ ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದೇವೆ ಎಂದರು.
ಶಿವಶಾಲ ಪಟ್ಟಣಕರ ಮತ್ತು ಮೋಹನ ಹಳ್ಳಿ ಮಾತನಾಡಿ, 70 ರ ದಶಕದಲ್ಲಿ ಬಿ.ಬಸವಲಿಂಗಪ್ಪ ನವರ ದೂರದೃಷ್ಟಿಯ ಫಲವಾಗಿ ಪಿ.ಟಿ.ಸಿ.ಎಲ್. ಕಾಯ್ದೆ ಜಾರಿಗೆ ಬಂದಿದ್ದರೂ ಸಹ ಜಾತಿವಾದಿಗಳ ಹಾಗೂ ಅಧಿಕಾರ ಶಾಹಿಯ ಮಸಲತ್ತಿನಿಂದ ಮತ್ತು ಸರ್ಕಾರಗಳ ಕುತಂತ್ರದಿಂದ ಪಿ.ಟಿ.ಸಿ.ಎಲ್. ಜಮೀನುಗಳ ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋರ್ಟಗಳಿಗೆ ಅಲೆಯುತ್ತಾ ವಂಚನೆಗೆ ಒಳಗಾಗಿದ್ದಾರೆ,
ದಲಿತ ಭೂ ಮಂಜೂರಾತಿದಾರರು ಮೇಲ್ಜಾತಿಯವರಿಂದ ವಂಚಿಸಲ್ಪಡುವುದನ್ನು ತಡೆಯುವ ಪಿಟಿಸಿಎಲ್ ಕಾಯ್ದೆಯು, ಪರಭಾರೆ ಮಾಡದ ಅವಧಿಯಲ್ಲಿ ಅಥವಾ ಸರ್ಕಾರದ ಅನುಮತಿಯಿಲ್ಲದೆ ಯಾವುದೇ ವ್ಯಕ್ತಿಯು ‘ಮಂಜೂರು ಮಾಡಿದ ಭೂಮಿ’ಯನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ನಿಯಮಗಳನ್ನು ಉಲ್ಲಂಘಿಸಿ ಭೂಮಿಯನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕ.ದ.ಸಂ.ಸ (ಅಂಬೇಡ್ಕರ ವಾದ) ರಾಜ್ಯ ಸಮಿತಿ “ಹೆಂಡಬೇಡ ಭೂಮಿ ಬೇಕು” ಹೆಂಡಬೇಡ ವಸತಿ ಶಾಲೆ ಬೇಕು ಎನ್ನುವ ಘೋಷಣೆಯನ್ನು 80ರ ದಶಕದಲ್ಲಿ ಮೊಳಗಿಸಿತ್ತು ಎಂದು ಹೇಳಿದರು.
ತಾಲ್ಲೂಕ ಗ್ರೇಡ 2 ತಹಶೀಲ್ದಾರ ಗುರುರಾಜ ಸಂಗಾವಿ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಎಸ್ಪಿ ಕಾರ್ಯದರ್ಶಿ ಶೇಖ ಬಾಬು ಉಸ್ಮಾನ, ತಾಲ್ಲೂಕ ಸಂಚಾಲಕ ಮರೇಪ್ಪ ಬಣಮಿಕರ, ಸಂಘಟನಾ ಸಂಚಾಲಕ ಮನೋಹರ ಕೊಳೂರ, ನಾಗರಾಜ ಮುದ್ನಾಳ, ಸುಭಾಷ ಸಾಕ್ರೆ ಹುಲಿಗೇಶ ನಾಟೇಕರ, ತುಕಾರಾಂ ಬೋಯಿ ಮತ್ತು ಜಗದೀಶ ಹುಲಿ, ದಯಾನಂದ ಸಾಗರ, ಶೈಲೇಂದ್ರ ಕುಸಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

