ಶಾಲೆಯಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದು, ಶಿಕ್ಷಣ ಇಲಾಖೆ ಆದೇಶ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಭಾರತ ಸಂವಿಧಾನದ ಪೀಠಿಕೆಯನ್ನು ಓದಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಪ್ರಾರ್ಥನೆ ಸಮಯದಲ್ಲಿ ಕಡ್ಡಾಯವಾಗಿ ಓದಲು ಕ್ರಮ ಕೈಗೊಳ್ಳಬೇಕು. ಪ್ರತಿದಿನ ಸರದಿಯಂತೆ ಒಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿ ಮುಂದಾಳತ್ವ ವಹಿಸಬೇಕು, ಉಳಿದವರು ಪುನರುಚ್ಚರಿಸಬೇಕು ಎಂದು ತಿಳಿಸಿದೆ. ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿಗಳು ಗ್ರಹಿಸಲು ಪೂರಕ ಅವಕಾಶವನ್ನು ಕಲಿಕೆಯಲ್ಲಿ ಒದಗಿಸಬೇಕು. ಅದಕ್ಕಾಗಿ ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿಸಲ್ಪಟ್ಟ ಅಂಶಗಳ ಆಧಾರದ ಮೇಲೆ ಧನಾತ್ಮಕ ಸಂವಾದ, ಚರ್ಚೆ, ಪ್ರಬಂಧ ರಚನೆ, ಚಿತ್ರಕಲಾ ಪ್ರದರ್ಶನ, ಹಾಡುಗಳು ಮತ್ತಿತರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಶಾಲೆಗಳಲ್ಲಿ ಸಂವಿಧಾನ ಪೀಠಿಕೆಯ ಭಾವಚಿತ್ರವನ್ನು ಎದ್ದು ಕಾಣುವಂತೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರದರ್ಶಿಸಬೇಕು ಎಂದು ತಿಳಿಸಲಾಗಿದೆ.