ಉಡುಗಿ, ಸಂಕೇಶ್ವರಹಾಳ ದಲಿತರಿಬ್ಬರ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಮಾದಿಗ ದಂಡೋರ ಸಮಿತಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸೇಡಂ ತಾಲೂಕಿನ ಉಡಗಿ ಗ್ರಾಮದ ನಿವಾಸಿ ಭಗವಂತ ರಾಜೇಂದ್ರಪ್ಪ ನಡಗೇರಿ ಹಾಗೂ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಸಂಕೇಶ್ವರಹಾಳ ಗ್ರಾಮದ ನಿವಾಸಿ ಭೂಮಾನಂದ ಇವರ ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿ ಮುಂದಿನ ದಿನಗಳಲ್ಲಿ ದಲಿತರ ಮೇಲೆ ಹಲ್ಲೆಯಾಗದಂತೆ ಸರ್ಕಾರದಿಂದ ಸೂಕ್ತ ರಕ್ಷಣೆ ಒದಗಿಸಿವಂತೆ ಒತ್ತಾಯಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿ ಮುಖಂಡರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಸೇಡಂ ತಾಲೂಕಿನ ಉಡಗಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿರುವ ಭಗವಂತ ರಾಜೇಂದ್ರಪ್ಪ ನಡಗೇರಿ ಇತನನ್ನು ಗ್ರಾಮದ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಕ್ಷುಲಕ ಕಾರಣಕ್ಕೆ ಆಗಸ್ಟ್ 10 ರಂದು ಜಾತಿ ನಿಂದನೆ ಮಾಡಿ ಆತನನ್ನು ಬರ್ಬರವಾಗಿ ಕೊಲೆ ಮಾಡಿರುತ್ತಾರೆ. ಇದೇ ರೀತಿ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಸಂಕೇಶ್ವರಹಾಳ ಗ್ರಾಮದ ಮಾದಿಗ ಸಮುದಾಯಕ್ಕೆ ಸೇರಿರುವ ಭೂಮಾನಂದ ಸಾಮಾಜಿಕ ಕಾರ್ಯಕರ್ತನಾಗಿದ್ದು ಬಿ.ಎಸ್.ಪಿ ಪಕ್ಷದಲ್ಲಿ ದುಡಿಯುತ್ತಿದ್ದ ಕೆಳಜಾತಿಯವನು ಬೆಳೆಯುತ್ತಿದ್ದಾನೆಂದು ಅಮಾನುಷವಾಗಿ ದಲಿತನೆಂಬ ಕಾರಣಕ್ಕೆ ಆಗಸ್ಟ್ 5 ರಂದು ಹಲ್ಲೆ ಮಾಡಿರುತ್ತಾರೆ. ಈ ರೀತಿ ದಲಿತರ ಮೇಲೆ ದಿನೇ ದಿನೇ ಹಲ್ಲೆಗಳು ನಡೆಯುತ್ತಿವೆ. ಇದರಿಂದ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ತಿಳಿಸಿದರು.
ದಲಿತರ ಮೇಲೆ ಹಲ್ಲೆ ಮಾಡುತ್ತಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರುಪಡಿಸಿ ಅವರನ್ನು ಗಡಿಪಾರು ಮಾಡಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತರ ಮೇಲೆ ಹಲ್ಲೆಯಾಗದಂತೆ ಸರ್ಕಾರದಿಂದ ಸೂಕ್ತ ರಕ್ಷಣೆ ಒದಗಿಸಬೇಕೆಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಉಪಾಧ್ಯಕ್ಷ ಜಗದೀಶ ಮುಕ್ತನಾಳ, ಮುಖಂಡರಾದ ಅಯ್ಯಪ್ಪ ಮರಗಪ್ಪ, ಬಸವರಾಜ ಶರಣಪ್ಪ, ಶರಣಪ್ಪ ಮಲ್ಲೇಶಪ್ಪ ಅವರು ಆಗ್ರಹಿಸಿದರು.

