ಸೇವಾ ವಯೋನಿವೃತ್ತಿ ಸಮಾರಂಭ | ಶಿಕ್ಷಣದಿಂದ ಸಮಸಮಾಜ ನಿರ್ಮಾಣ ಸಾಧ್ಯ: ಬಿಸ್ಲಪ್ಪ ಕಟ್ಟಿಮನಿ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಸಮಾಜದಲ್ಲಿ ಸಮಾನತೆ ಸಿಗಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕಿದೆ. ಶಿಕ್ಷಣದಿಂದ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ಬಿಸ್ಲಪ್ಪ ಕಟ್ಟಿಮನಿ ಹೇಳಿದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವಾ ವಯೋನಿವೃತ್ತಿಯಾದ ಬಿಸ್ಲಪ್ಪ ಕಟ್ಟಿಮನಿ ಅವರಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯಾದಗಿರಿ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಶನಿವಾರ ನಗರದ ಎಸ್ ಡಿಎನ್ ಸಭಾಂಗಣದಲ್ಲಿ ಹಮ್ಮಿಕೊಂಡ ಸೇವಾ ವಯೋನಿವೃತ್ತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಷ್ಟ ನಷ್ಟದಿಂದ ಓದಿ ಉಪನ್ಯಾಸಕನಾಗಿ ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಕುರಿತು ವಿವರಿಸಿ ಬಡತನದಿಂದ ಶಿಕ್ಷಣ ಪಡೆಯುವಾಗ ಎದುರಿಸಿದ ಸವಾಲುಗಳ ಬಗ್ಗೆ ಮೆಲುಕು ಹಾಕಿದರು.
ಸಮಾಜದಲ್ಲಿ ನಡೆಯುವ ಅಸಮಾನತೆಗೆ ನಾವು ಸಂಪಾದಿಸುವವ ಜ್ಞಾನವೇ ಉತ್ತರವಾಗಲಿದೆ. ನಿರಂತರವಾಗಿ ಜೀವ ಇರುವವರೆಗೂ ಕಲಿಕೆ ಇರಬೇಕಿದೆ. ಶಿಕ್ಷಣ ಪಡೆದು ಸಮಾಜ ಪರಿವರ್ತಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಬೇಕು. ಓದಿ ಉನ್ನತ ಗುರಿಸಾಧಿಸಿ ಉದ್ಯೋಗ ಪಡೆದಾಗ ಆರ್ಥಿಕ ಸಬಲೀಕರಣವಾಗಲು ಸಾಧ್ಯವಿದೆ. ಸಮಾಜದ ಕಟ್ಟಕಡೆಯ ಬಡವನಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕಿದೆ. ಪ್ರಬುದ್ಧ ಭಾರತ ನಿರ್ಮಾಣಕ್ಕೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮೈಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್.ಜಾನ್ , ಗುಲಬರ್ಗಾ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಡೀನ್ ಡಾ.ದೇವಿದಾಸ ಮಾಲೆ ಅವರು ಮಾತನಾಡಿ ಬಿಸ್ಲಪ್ಪ ಕಟ್ಟೀಮನಿ ಅವರು 30 ವರ್ಷಗಳ ಕಾಲ ಉಪನ್ಯಾಸಕರಾಗಿ ಶೈಕ್ಷಣಿಕ ಸೇವೆ ಕಾರ್ಯ ಮಾಡಿ ಅನೇಕ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡಿದ್ದಾರೆ. ಸೌಮ್ಯ ಸ್ವಭಾವ, ಒಳ್ಳೆತನ, ಸುಂದರ ಮನಸ್ಸಿನ ವ್ಯಕ್ತಿಯಾಗಿದ್ದಾರೆ. ಸ್ಪಂದಿಸುವ ಮನೋಭಾವನೆ ಹೊಂದಿದ್ದಾರೆ. ಸ್ನೇಹ ಜೀವಿಯಾದ ಕಟ್ಟಿಮನಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ವೇಳೆ ಅನೇಕರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಚನ್ನಬಸ್ಸಯ್ಯ ಸ್ವಾಮಿ, ಇ.ಎನ್.ಓಂಕಾರ್, ಯಾಮಾರೆಡ್ಡಿ ಮುಂಡಾಸ್, ಯಮನಪ್ಪ ಗಿರಿಜಾಲಿ, ಚನ್ನಬಸಪ್ಪ ಕುಳಗೇರಿ, ಶಿವು ಮಲ್ಲು, ಎಂ.ಕೆ.ಬಿರನೂರು, ಚಂದ್ರಶೇಖರ ಕಡೇಸೂರ ಸೇರಿದಂತೆ ಅನೇಕರು ಇದ್ದರು. ಕು.ರೇಣುಕಾ ನಿರೂಪಿಸಿ ವಂದಿಸಿದರು.

