Oplus_131072

ಚಿತ್ತಾಪುರ ತಾಲೂಕು ವಿಪತ್ತು ನಿರ್ವಾಹಣಾ ಪ್ರಾಧಿಕಾರದ ಸಮಿತಿಯ ಸಭೆ, ಕಾಗಿಣಾ ಮತ್ತು ಭೀಮಾ ನದಿ ಪ್ರವಾಹ ಉಂಟಾಗುವ ಸಾಧ್ಯತೆ, ಮುನ್ನೆಚ್ಚರಿಕೆ ವಹಿಸಿ: ತಹಸೀಲ್ದಾರ್ ಸೂಚನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: 2025-26ನೇ ಸಾಲಿನ ಮುಂಗಾರು ಹಂಗಾಮಿನ ದಿನಗಳಲ್ಲಿ ಭಾರಿ ಮಳೆಯಿಂದ ಕಾಗಿಣಾ ಮತ್ತು ಭೀಮಾ ನದಿ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಚಿತ್ತಾಪುರ ತಾಲೂಕಿನಲ್ಲಿ ಪ್ರಾವಾಹ ಪೀಡಿತ ಗ್ರಾಮಗಳಲ್ಲಿ ತೊಂದರೆಯಾಗದಂತೆ ಅಧಿಕಾರಿಗಳು ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಸೂಚನೆ ನೀಡಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಚಿತ್ತಾಪುರ ತಾಲೂಕು ವಿಪತ್ತು ನಿರ್ವಾಹಣಾ ಪ್ರಾಧಿಕಾರದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದುರ್ಬಲ ಸ್ಥಳಗಳನ್ನು ಗುರುತಿಸಿ ಅಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಕಾಳಜಿ ಕೇಂದ್ರ ಸ್ಥಾಪಿಸಿ ಊಟ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮಾಡಬೇಕು. ಪ್ರತಿ ಬಾರಿ ಪ್ರವಾಹಕ್ಕೆ ತುತ್ತಾಗುವ ಬಳವಡಗಿ, ಕುಂದನೂರ್, ಮಾರಡಗಿ, ಚಾಮನೂರು ಗ್ರಾಮಗಳಲ್ಲಿ ಹೆಚ್ಚು ಗಮನ ಹರಿಸಿ, ಈ ಗ್ರಾಮಗಳಲ್ಲಿ ಈಜು ಬರುವವರನ್ನು ಗುರುತಿಸಿ ಸಮಸ್ಯೆ ಆದಾಗ ಸಹಾಯಕ್ಕೆ ಬರಲಿದ್ದಾರೆ ಎಂದರು.

ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಬೇಕು. ನೀವು ಮಾಡಿದ ಕೆಲಸಗಳ ಬಗ್ಗೆ ಗ್ರೂಪ್ ಗೆ ಶೇರ್ ಮಾಡಿ, ತುರ್ತು ಪರಿಸ್ಥಿತಿಯಲ್ಲಿ ಕ್ರಮ ಕೈಗೊಳ್ಳಲು ಈಗಾಗಲೇ ತಂಡ ರಚಿಸಲಾಗಿದೆ ಅದರಂತೆ ಕಾರ್ಯನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ಮೊದಲ ಆದ್ಯತೆಯಾಗಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮನೆಗಳು ಬಿದ್ದಾಗ ಪಿಆರ್’ಇ, ಗ್ರಾಮಾಡಳಿತಾಧಿಕಾರಿ, ಕಂದಾಯ ಇಲಾಖೆ ವರದಿಯ ಜೊತೆಗೆ ಡಿಸಿಬಿ ವರದಿ ನೀಡಬೇಕು ಅಂದಾಗ ಸೂಕ್ತ ಪರಿಹಾರ ನೀಡಲು ಸಾಧ್ಯ ಎಂದು ಹೇಳಿದರು.

ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮಳೆ ನೀರು, ಚರಂಡಿ ನೀರು ಕುಡಿಯುವ ನೀರಿಗೆ ಸೇರದಂತೆ ಹಾಗೂ ಮಳೆ ನೀರು ಮನೆಗಳಿಗೆ ಹೋಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಚಿತ್ತಾಪುರ ಮತ್ತು ವಾಡಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರಸ್ತುತ ಮಳೆಗಾಲ ಇರುವುದರಿಂದ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳು ಶಿಥಿಲಗೊಂಡು ಸೋರುತ್ತಿರುವುದು ಕಂಡುಬಂದರೆ ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಿಡಿಪಿಒ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆ ಗಾಳಿಗೆ ಗಿಡಮರಗಳು ಬಿದ್ದರೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಗಿಡಮರಗಳನ್ನು ಕಡಿಯಬೇಡಿ ಎಂದು ಕಿವಿಮಾತು ಹೇಳಿದರು.

ಸಭಗೆ ಗೈರು ಹಾಜರಿ ಆದ ಚಿತ್ತಾಪುರ ಹಾಗೂ ಶಹಾಬಾದ ಸಿಡಿಪಿಒಗಳ ವಿರುದ್ಧ ತಹಸೀಲ್ದಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಹಾಬಾದ ಸಿಡಿಪಿಒ ಪರವಾಗಿ ಆಗಮಿಸಿದ ಸಿಬ್ಬಂದಿ ಅವರು ಕಲಬುರಗಿ ಸಭೆಗೆ ಹೋಗಿದ್ದಾರೆ ಎಂದಾಗ ಯಾವಾಗಲೂ ಬರೀ ಕಥೆ ಹೇಳುತ್ತಿರೇನು ಎಂದು ತರಾಟೆಗೆ ತೆಗೆದುಕೊಂಡರು. ಗೈರು ಆದ ಇಲಾಖೆಗಳ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಎಂದು ಸೂಚಿಸಿದರು.

ಮಾರ್ಗಸೂಚಿ ಪ್ರಕಾರ ಎಲ್ಲರೂ ಕೆಲಸ ಮಾಡಬೇಕು, ಮಳೆ ಹೇಳಿ ಕೇಳಿ ಬರುವುದಿಲ್ಲ ಹೀಗಾಗಿ ಎಲ್ಲರೂ ಕೇಂದ್ರ ಸ್ಥಾನದಲ್ಲಿದ್ದು ಸೇವೆ ಸಲ್ಲಿಸಿ, ಎಲ್ಲರೂ ಕೂಡಿ ಜಂಟಿಯಾಗಿ ಕೆಲಸ ಮೋಡೋಣ ನಾವೆಲ್ಲರೂ ಜಾಗೃತರಾಗಿ ಯಾವುದೇ ಸಮಸ್ಯೆ ಆಗದಂತೆ ಚಾಚು ತಪ್ಪದೆ ಕೆಲಸ ಮಾಡಿ ಪರಿಹಾರ ಕಂಡುಕಳ್ಳೋಣ ಎಂದು ಹೇಳಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಎಸ್.ಮಾಳಗಿ, ಲೋಕೋಪಯೋಗಿ ಸೇಡಂ ವಿಭಾಗದ ಎಇಇ ಗಾಜರೆ, ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕ ಪರಮೇಶ್ವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ ಅವರು ಮಾತನಾಡಿ, ಕೆಲವು ಸೂಚನೆಗಳನ್ನು ನೀಡಿದರು. ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಲೋಕೋಪಯೋಗಿ ಇಲಾಖೆ ಎಇಇ ಮೊಹಮ್ಮದ್ ಸಲೀಂ, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್, ತೋಟಗಾರಿಕೆ ಅಧಿಕಾರಿ ಶಂಕರಗೌಡ, ಟಿಪಿಒ ಶಿವಶರಣಪ್ಪ ಮಂಠಾಳೆ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಅಶ್ವಥ್ ನಾರಾಯಣ ಸೇರಿದಂತೆ ಕಂದಾಯ ನಿರೀಕ್ಷಕರು, ಗ್ರಾಮಾಡಳಿತಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!