ವಿಜ್ಞಾನೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ವಾರ್ಷಿಕ ಸಮ್ಮೇಳನ, ಯಶಸ್ಸಿಗೆ ಕೇವಲ ಓದು ಸಾಲದು ಸತತ ಪ್ರಯತ್ನ ಅಗತ್ಯ: ಸತ್ಯಂಪೇಟೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಬದುಕಿನಲ್ಲಿ ಯಶಸ್ಸು ಪಡೆಯಲು ಕೇವಲ ಓದಿದರೆ ಸಾಲದು. ಅದಕ್ಕೆ ಸತತ ಪ್ರಯತ್ನ ಬೇಕು. ಬದುಕಿನ ದಾರಿ ಬಗ್ಗೆ ಸ್ಪಷ್ಟ ಕಲ್ಪನೆ ಹಾಗೂ ನಿರ್ಧಿಷ್ಟ ಯೋಜನೆಗಳಿರಬೇಕು ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ 2024-25ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಮಯ ಮನುಷ್ಯ ಜೀವನದ ಅದ್ಭುತ ಗಳಿಕೆಯಾಗಿದ್ದು, ಸಮಯಪ್ರಜ್ಞೆ ಇದ್ದವರಿಗೆ ಜೀವನಪ್ರಜ್ಞೆ ಇರುತ್ತದೆ. ಸಮಯದ ಕಾಮನ್ ಸೆನ್ಸ್ ಇರಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ಸ್ವಾಯತ್ತ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಶ್ರೀಮಂತ ಬಿ. ಹೋಳ್ಕರ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದಾರೆ. ಸತತ ಪ್ರಯತ್ನವಿಲ್ಲದಿರುವುದರಿಂದ ಫಲಿತಾಂಶದಲ್ಲಿ ಇಳಿಕೆ ಕಂಡು ಬರುತ್ತಿದೆ. ಆದರೂ ಕೆಸರಿನಲ್ಲಿ ಕಮಲ ಅರಳುವಂತೆ ಈ ಭಾಗದ ವಿದ್ಯಾರ್ಥಿಗಳು ಓದುವ, ಬರೆಯುವ ತಂತ್ರವನ್ನು ಸರಿಯಾಗಿ ಬಳಸಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಅತಿಥಿಯಾಗಿದ್ದ ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಶರಣಪ್ಪ ಸೈದಾಪುರ ಮಾತನಾಡಿ, ಸಂವಿಧಾನದ ಆಶಯದಂತೆ ವಿದ್ಯಾರ್ಥಿಗಳು ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳಸಿಕೊಳ್ಳಬೇಕು. ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶಿವಾನಂದ ಎಚ್. ಲೇಂಗಟಿ ಮಾತನಾಡಿ, ಜ್ಞಾನವೇ ಶಕ್ತಿ. ಆದರೆ ಕಾನೂನು ಉನ್ನತ ಶಕ್ತಿಯಾಗಿದೆ. ಜ್ಞಾನದ ದಾಹ ಇರಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರ ಕೂಡ ಅಗತ್ಯವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ತತ್ವಾದರ್ಶಗಳಿಂದ ಬದುಕು ಪರಿವರ್ತನೆ ಆಗುತ್ತದೆ ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ.ರೇಣುಕಾ ಸಾಸನಮರಿ, ಸಾಂಸ್ಕೃತಿಕ ಕ್ರೀಡಾ ಸಮಿತಿ ಸಂಚಾಲಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ. ಆಶಾ ಅಫ್ರೀನ್ ವೇದಿಕೆಯಲ್ಲಿದ್ದರು. ಇದೇ ವೇಳೆಯಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕುದರಿಹಾಳ ನಿಂಗಪ್ಪ ಸ್ವಾಗತಿಸಿ ನಿರೂಪಿಸಿದರು. ಶ್ರಾವಣಿ ಪ್ರಾರ್ಥನೆಗೀತೆ ಹಾಡಿದರು. ಡಾ.ಸೇವಂತಾ ವಂದಿಸಿದರು. ವಾಣಿ ಮರಡಿ, ಡಾ.ವೀಣಾ ಅಂಕದ, ಡಾ.ಗಿರೀಶ ಇತರರಿದ್ದರು.
“ಐಎಎಸ್, ಕೆ.ಎ.ಎಸ್ ಪರೀಕ್ಷೆ ಬರೆಯಲು ಕಲಬುರಗಿಯಲ್ಲಿ ತರಬೇತಿ ಕೇಂದ್ರ ಆರಂಭಿಸಿರುವಂತೆ ಜ್ಯುಡಿಷಿಯಲ್ ಸೇರಿದಂತೆ ವಿವಿಧ ಪರೀಕ್ಷೆ ಬರೆಯಲು ಕಲಬುರಗಿಯಲ್ಲಿ ತರಬೇತಿ ಕೇಂದ್ರ ಸ್ಥಾಪಿಸಬೇಕು”.-ಡಾ. ಶಿವಾನಂದ ಲೇಂಗಟಿ, ಪ್ರಾಚಾರ್ಯರು, ವಿಜಿಎಲ್ ಕಾಲೇಜು, ಕಲಬುರಗಿ