Oplus_131072

ಚಿತ್ತಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಾಳೆ, ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ |  ಆಕಾಂಕ್ಷಿಗಳ ಎದೆಯಲ್ಲಿ ಢವ ಢವ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಾಳೆ ಸೋಮವಾರ ನಡೆಯಲಿರುವ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭಾನುವಾರ ವೀಕ್ಷಕರಾಗಿ ಆಗಮಿಸಿದ್ದ ಕಲಬುರಗಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಜಾರ್ ಅಲ್ಲಂ ಖಾನ್ ಮತ್ತು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ರೆಡ್ಡಿ ಅವರು ನಿರ್ದೇಶಕರ, ಪ್ರಮುಖರ ಅಭಿಪ್ರಾಯ ಸಂಗ್ರಹಿಸಿದರು. ಇದರಿಂದ ಆಕಾಂಕ್ಷಿಗಳ ಎದೆಯಲ್ಲಿ ಢವ ಢವ ಶೂರುವಾಗಿದೆ. ಅಂತಿಮ ಅಭ್ಯರ್ಥಿ ಯಾರು ಎಂಬುದು ಬಹಿರಂಗವಾಗದೆ ಗುಪ್ತವಾಗಿದ್ದು ನಾಳೆ ಬೆಳಗ್ಗೆ ನಾಮಪತ್ರ ಹಾಕುವ ಸಮಯದವರೆಗೆ ಕಾಯಬೇಕಿದೆ.

ಈ ವೇಳೆ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ, ನಿರ್ದೇಶಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡಕ್ಕೆ ತಿಳಿಸುತ್ತೇವೆ ಎಂದು ಹೇಳಿದರು. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಅಧ್ಯಕ್ಷ ಮಹಿಮೂದ್ ಸಾಹೇಬ್, ಮುಖಂಡರಾದ ಶಿವಾನಂದ ಪಾಟೀಲ, ಜಗಣ್ಣಗೌಡ ರಾಮತೀರ್ಥ, ಮುಕ್ತಾರ್ ಪಟೇಲ್, ವೀರಣ್ಣಗೌಡ ಪರಸರೆಡ್ಡಿ, ಸಿದ್ದುಗೌಡ ಅಫಜಲಪುರ, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಚಂದ್ರಶೇಖರ ಸಾತನೂರು, ಸುನೀಲ್ ದೊಡ್ಡಮನಿ, ಅಣ್ಣಾರಾವ ಪಾಟೀಲ, ವೀರುಪಾಕ್ಷಪ್ಪ ಗಡ್ಡದ್, ಶಾಂತಣ್ಣ ಚಾಳೀಕಾರ, ಬಸವರಾಜ ಹೊಸಳ್ಳಿ, ನಾಗರೆಡ್ಡಿ ಗೋಪಸೇನ್, ಸೂರ್ಯಕಾಂತ ಪೂಜಾರಿ, ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರ, ಶಿವಶಂಕ್ರಯ್ಯ ಸ್ವಾಮಿ, ದೇವು ಯಾಬಾಳ, ಪಾಶಾಮಿಯ್ಯಾ ಖುರೇಷಿ, ದೇವಿಂದ್ರ ಅರಣಕಲ್, ನಾಗಯ್ಯ ಗುತ್ತೇದಾರ, ಓಂಕಾರ ರೇಷ್ಮಿ, ಗಂಗಾಧರ್ ಡಿಗ್ಗಿ, ಕರಣು ಅಲ್ಲೂರು, ಶರಣು ಡೋಣಗಾಂವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸ್ಥಾನಗಳ ಬಲಾಬಲ:

ಪಿಎಲ್‌ಡಿ ಬ್ಯಾಂಕ್‌ನ ಒಟ್ಟು 14 ನಿರ್ದೇಶಕ ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 11 ಹಾಗೂ 3 ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಕಾಂಗ್ರೆಸ್ ಬೆಂಬಲಿತರೇ ಅಧಿಕಾರದ ಗದ್ದುಗೆಗೇರುವುದು ಖಚಿತವಾಗಿದೆ.

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು:

ಅಳ್ಳೋಳ್ಳಿ ಸಾಲಗಾರರ ಕ್ಷೇತ್ರದ ಭೀಮಣ್ಣ ಸಾಲಿ, ಚಿತ್ತಾಪುರ ಸಾಲಗಾರರ ಕ್ಷೇತ್ರದ ಅಣ್ಣಾರಾವ ಪಾಟೀಲ್ ಮುಡಬೂಳ, ಗುಂಡಗುರ್ತಿ ಕ್ಷೇತ್ರದ ಸುನೀಲ್ ದೊಡ್ಡಮನಿ, ಚಿತ್ತಾಪುರ ಸಾಲಗಾರರಲ್ಲದ ಕ್ಷೇತ್ರದ ವೀರುಪಾಕ್ಷಪ್ಪ ಗಡ್ಡದ್ ಅವರಲ್ಲಿ ತೀವ್ರ ಪೈಪೋಟಿ ನಡೆದಿದೆ. ಒಂದು ವೇಳೆ ಅಧ್ಯಕ್ಷ ಸ್ಥಾನ ಕೈ ತಪ್ಪಿದರೆ ಅಣ್ಣಾರಾವ ಪಾಟೀಲ ಅಥವಾ ಸುನೀಲ್ ದೊಡ್ಡಮನಿ ಇವರಿಬ್ಬರಲ್ಲಿ ಯಾರಾದರೂ ಉಪಾಧ್ಯಕ್ಷರಾಗಬಹುದು ಎಂದು ತಿಳಿದುಬಂದಿದೆ.

ಪಿಎಲ್‌ಡಿ ಬ್ಯಾಂಕ್‌ ಇತಿಹಾಸ: 

ಬಿ.ಆರ್.ಕಾಂತಾ (1961 ರಿಂದ 1964), ಗುಂಡಾಚಾರ್ಯ ತೆಂಗಳಿಕರ್ (1964 ರಿಂದ 1966), ಶಿವಲಿಂಗಪ್ಪ ಪಾಟೀಲ (1970 ರಿಂದ 1971), ಮಹ್ಮದ್ ಯಾಸನ್ ಅಲಿ (1971 ರಿಂದ 1975), ಅಮೃತರಾವ್ ನಡುಗಟ್ಟಿ ಗೋಟೂರ (1975 ರಿಂದ 1976), ತಿಪ್ಪಣ್ಣಪ್ಪ ಕಮಕನೂರ (1976 ರಿಂದ 1983), ಸಾಯಬಣ್ಣ ಭಜಂತ್ರಿ (1983 ರಿಂದ 1989), ಮಲ್ಲಿಕಾರ್ಜುನ ದೋರನಳ್ಳಿ ನಾಲವಾರ (1989 ರಿಂದ 1991), ಶಿವರಾಯ ಪಾಟೀಲ ಬೆಳಗುಂಪಾ (1991 ರಿಂದ 1995), ಮಲ್ಲಿನಾಥ ಇಂದೂರ (1995 ರಿಂದ 2024), ಚಂದ್ರಶೇಖರ ಅವಂಟಿ (2024 ರಿಂದ 2025).

ಪಿಎಲ್‌ಡಿ ಬ್ಯಾಂಕ್‌ ಇತಿಹಾಸದಲ್ಲಿ ಸುದೀರ್ಘವಾಗಿ 30 ವರ್ಷಗಳ ಕಾಲ ಅಧ್ಯಕ್ಷರಾಗಿ ಅಧಿಕಾರ ನಡೆಸಿದ ಮಲ್ಲಿನಾಥ ಇಂದೂರ ಅವರು ದಾಖಲೆ ಬರೆದಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!