ನ್ಯಾ. ನಾಗಮೋಹನ ದಾಸ್ ಒಳ ಮೀಸಲಾತಿ ವರದಿ ಅವೈಜ್ಞಾನಿಕ ಎಂಬ ಬೆಣ್ಣೂರಕರ್ ಆರೋಪ ಸತ್ಯಕ್ಕೆ ದೂರ: ಹೊಸ್ಸೂರಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನ್ಯಾ. ನಾಗಮೋಹನ ದಾಸ್ ಒಳ ಮೀಸಲಾತಿ ವರದಿ ಅವೈಜ್ಞಾನಿಕ ಎಂಬ ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಆರೋಪ ಸತ್ಯಕ್ಕೆ ದೂರ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಗಸ್ಟ್ 19ರ ವಿಶೇಷ ಸಂಪುಟ ಸಭೆಯಲ್ಲಿ ಒಳ ಮಿಸಲಾತಿ ಜಾರಿಗೆ ಅಂತಿಮ ತೀರ್ಮಾನ ಸರ್ಕಾರ ಕೈಗೊಳ್ಳಲೇಬೇಕು. ಇಲ್ಲವಾದರೆ ರಾಜ್ಯದ 29 ಸಾವಿರ ಹಳ್ಳಿಗಳಲ್ಲಿ ಅಸ್ಪ್ರಶ್ಯ ಸಮಾಜದವರು ಬೀದಿಗಿಳಿದು ಮಾಡು ಇಲ್ಲವೇ ಮಡಿ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರವೇ ಈ ಹಿಂದೆ ರಚಿಸಿದ ಹಾವನೂರು ಆಯೋಗ, ಎ.ಜೆ ಸದಾಶಿವ ಆಯೋಗ, ಕಾಂತರಾಜ್ ಆಯೋಗ ಮತ್ತು ನಾಗಮೋಹನ ದಾಸ್ ಆಯೋಗಗಳು ಸಲ್ಲಿಸಿರುವ ವರದಿಗಳ ಜೊತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾದ ಮಾಧುಸ್ವಾಮಿ ವರದಿ ಇದೆ ಈ ಐದು ವರದಿಯಲ್ಲಿ ಯಾವುದಾದರೂ ಒಂದು ವರದಿಯನ್ನು ಸರ್ಕಾರ ಒಪ್ಪಿಕೊಳ್ಳಲೇಬೇಕು. ಅಗತ್ಯವಿದ್ದರೆ ವರದಿಯಲ್ಲಿ ತಿದ್ದುಪಡಿ ಮಾಡಿಯಾದರೂ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಳ ಮೀಸಲಾತಿ ನೀಡಬೇಕು ಎಂಬುದರ ಹಿಂದೆ ಯಾವುದೇ ರಾಜಕೀಯ ಅಜೆಂಡ ಅಲ್ಲ, ಇದು ಅಸ್ಪೃಶ್ಯ ಸಮಾಜದ ಸಮಸ್ಯೆಯಾಗಿದೆ ಸಾಮಾಜಿಕ ನ್ಯಾಯಕ್ಕಾಗಿ ಪಕ್ಷಾತೀತವಾಗಿ ರಾಜ್ಯಾದ್ಯಂತ ಹೋರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕೊಟ್ಟ ಮಾತಿನಂತೆ ಸರ್ಕಾರ ಶೀಘ್ರದಲ್ಲಿ ನ್ಯಾ. ನಾಗಮೋಹನ ದಾಸ್ ಒಳ ಮೀಸಲಾತಿ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

