ನಾಗಾವಿ ನಾಡಿನಲ್ಲಿ ಮಳೆಯಲ್ಲಿಯೂ ಗಣೇಶ ಮೂರ್ತಿಗಳ ಭವ್ಯ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಾಗಾವಿ ನಾಡಿನಾದ್ಯಂತ ಗಣೇಶ ಉತ್ಸವ ಮಂಡಳಿಯವರು ಹಾಗೂ ಸಾರ್ವಜನಿಕರು ಬುಧವಾರ ಮಳೆಯಲ್ಲಿಯೂ ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿದರು.
ಮನೆ ಹಾಗೂ ಪ್ರಮುಖ ಬೀದಿಗಳಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಗಣಪತಿಯ ಆರಾಧನೆ ಶ್ರದ್ಧೆ, ಭಕ್ತಿಯಿಂದ ನಡೆಯಿತು. ಮಳೆಯಲ್ಲಿಯೂ ಗಣಪನನ್ನು ಹುರುಪಿನಿಂದ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ಪಟ್ಟಣದ ನಾಗಾವಿ ವೃತ್ತದಲ್ಲಿ ನಾಗಾವಿ ನಾಡು ಯೂಥ್ ಗ್ರೂಪ್ ವತಿಯಿಂದ ಗಣೇಶ ಮಹಾರಾಜರ ಆಗಮನ ಶೋಭೆ ಯಾತ್ರೆಯು ಡೊಳ್ಳು ಕುಣಿತದ ಜೊತೆಗೆ ವಿವಿಧ ಕಲಾ ತಂಡಗಳೊಂದಿಗೆ ಯಶಸ್ವಿಯಾಗಿ ನಡೆಯಿತು. ವಿಶೇಷವಾಗಿ ಡೊಳ್ಳು ಕುಣಿತ, ಬ್ಯಾಂಡ್ ಹಾಗೂ ಹುಲಿ, ಸಿಂಹ, ಚಿರತೆ, ಕರಡಿ, ದುರ್ಗಾದೇವಿ ಸೇರಿದಂತೆ ಹಲವು ವೇಷಧಾರಿಗಳು ಆಕರ್ಷಕವಾಗಿ ಎಲ್ಲರ ಗಮನ ಸೆಳೆಯಿತು.
ಪಟ್ಟಣದ ಬಾಲಾಜಿ ಮಂದಿರದಿಂದ ಪ್ರಾರಂಭವಾದ ಗಣೇಶ ಮೂರ್ತಿಯ ಮೆರವಣಿಗೆ ಲಾಡ್ಜಿಂಗ್ ಕ್ರಾಸ್, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ರಸ್ತೆ, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ತರಕಾರಿ ಮಾರುಕಟ್ಟೆ ರಸ್ತೆ, ಜನತಾ ವೃತ್ತದ ಮೂಲಕ ನಾಗಾವಿ ವೃತ್ತಕ್ಕೆ ತಲುಪಿತ್ತು. ನಂತರ ಪೂಜೆ ಕಾರ್ಯಕ್ರಮ ನಡೆಯಿತು.
ಮೆರವಣಿಗೆಯಲ್ಲಿ ಯುವ ಮುಖಂಡರಾದ ಸಾಬಣ್ಣ ಹೋಳಿಕಟ್ಟಿ, ಸತೀಶ್ ಭಜಂತ್ರಿ, ರಾಜೇಶ್ ಹೋಳಿಕಟ್ಟಿ, ಶಿವಲಿಂಗ ಭಜಂತ್ರಿ, ಭೀಮಾಶಂಕರ ಹೋಳಿಕಟ್ಟಿ, ಲಕ್ಷ್ಮಣ ತಿಪ್ಪಣ್ಣ, ಮಹೇಶ್ ಭೋವಿ, ಮಲ್ಲಪ್ಪ ಹೋಳಿಕಟ್ಟಿ, ಅಂಬರೇಷ್ ಭೋವಿ, ನಿಂಗು ಭೋವಿ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು. ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

