ಯಾದಗಿರಿ ಚಲೋ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ | ಅಂಬಿಗರ ಚೌಡಯ್ಯ ಕುರಿತು ಅವಹೇಳನಕಾರಿ ಹೇಳಿಕೆಗೆ ಕೋಲಿ ಸಮಾಜ ಖಂಡನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೋಲಿ ಸಮಾಜದ ಗುರು ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಬಗ್ಗೆ ನಾಯಕ ಸಮುದಾಯದವರು ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಚಿತ್ತಾಪುರ ತಾಲೂಕು ಕೋಲಿ ಸಮಾಜವು ಖಂಡಿಸುತ್ತದೆ ಎಂದು ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನರ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚೌಡಯ್ಯನವರ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಕುರಿತು ದಾಖಲಾಗಿರುವ ಪ್ರಕರಣದಡಿ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಮತ್ತು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಸಮಾಜವು ಒತ್ತಾಯಿಸುತ್ತದೆ. ಚೌಡಯ್ಯನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಘಟನೆಯನ್ನು ಖಂಡಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯಾದಗಿರಿಯಲ್ಲಿ ಸೆ.1 ರಂದು ಕೋಲಿ ಕಬ್ಬಲಿಗ, ತಳವಾರ ಸಮಾಜದಿಂದ ನಡೆಯುತ್ತಿರುವ ಐತಿಹಾಸಿಕ ಪ್ರತಿಭಟನೆಗೆ ಚಿತ್ತಾಪುರ ತಾಲೂಕು ಕೋಲಿ ಸಮಾಜವು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆಗೆ ಬೆಂಬಲಿಸಿ ಯಾದಗಿರಿ ಚಲೋ ಕಾರ್ಯಕ್ರಮದಡಿ ಸಮಾಜದ ಪದಾಧಿಕಾರಿಗಳು, ಮುಖಂಡರು, ಯುವಕರು ಭಾಗವಹಿಸುತ್ತಿದ್ದು ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟಿನ ಶಕ್ತಿ ಸರ್ಕಾರಗಳಿಗೆ ತೋರಿಸಬೇಕಿದೆ. ಪ್ರತಿಭಟನೆ ಯಶಸ್ವಿಗೆ ಸಮಾಜದ ಜನರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಾಲೂಕು ಕೋಲಿ ಸಮಾಜ ಪ್ರಧಾನ ಕಾರ್ಯದರ್ಶಿ ಕರಣಕುಮಾರ ಬೂನಿ, ನಗರ ಕೋಲಿ ಸಮಾಜ ಗೌರವಾಧ್ಯಕ್ಷ ಭೀಮಣ್ಣಾ ಹೋತಿನಮಡಿ, ನಗರ ಕೋಲಿ ಸಮಾಜ ಅಧ್ಯಕ್ಷ ಪ್ರಭು ಹಲಕರ್ಟಿ, ತಾಲೂಕು ಯುವ ಕೋಲಿ ಸಮಾಜ ಅಧ್ಯಕ್ಷ ರಾಜೇಶ ಹೋಳಿಕಟ್ಟಿ, ನಗರ ಯುವ ಕೋಲಿ ಸಮಾಜ ಅಧ್ಯಕ್ಷ ಬಸವರಾಜ ಮೈನಾಳಕರ್ ಅವರು ಮನವಿ ಮಾಡಿದ್ದಾರೆ.

