ಮಳೆ ಹಾನಿಗೆ ರಾಜ್ಯ ಸರ್ಕಾರ ಸ್ಪಂದನೆ | ಚಿತ್ತಾಪುರ ರೈತರಿಗೆ ರೂ.20.58 ಕೋಟಿ ಬಿಡುಗಡೆ: ಶರಣು ಡೋಣಗಾಂವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಂಡ ರೈತರಿಗೆ ರಾಜ್ಯ ಸರ್ಕಾರದಿಂದ ರೂ.20.58 ಕೋಟಿ ಪರಿಹಾರ ಬಿಡುಗಡೆಗೊಂಡಿದೆ ಎಂದು ಪಂಚ ಗ್ಯಾರಂಟಿ ಜಿಲ್ಲಾ ಸಮಿತಿ ಸದಸ್ಯ ಶರಣು ಡೋಣಗಾಂವ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುಂದಾಳತ್ವದಲ್ಲಿ ಈ ಪರಿಹಾರ ಬಿಡುಗಡೆ ಪ್ರಕ್ರಿಯೆ ನಡೆದಿದೆ. ಇತ್ತೀಚಿನ ಮಳೆ ಹಾನಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಖುದ್ದಾಗಿ ಹಾನಿಗೊಂಡ ಪ್ರದೇಶಗಳ ಸಮೀಕ್ಷೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಹಿತದೃಷ್ಟಿಯಿಂದ ತ್ವರಿತವಾಗಿ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 3.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದ್ದು, ರಾಜ್ಯ ಸರ್ಕಾರವು ಒಟ್ಟು ರೂ.518 ಕೋಟಿ ಪರಿಹಾರವನ್ನು ಎರಡು ಕಂತುಗಳಲ್ಲಿ ಬಿಡುಗಡೆ ಮಾಡಿದೆ. ಮೊದಲ ಕಂತಿನಲ್ಲಿ ರೂ.268 ಕೋಟಿ ಹಾಗೂ ಎರಡನೇ ಕಂತಿನಲ್ಲಿ ಸುಮಾರು ರೂ.250 ಕೋಟಿ ಮಂಜೂರಾತಿ ಮಾಡಿದೆ. ತಾಲೂಕಿನಲ್ಲಿ 23.225 ಹೆಕ್ಟೇರ್ ಬೆಳೆ ಹಾನಿ ದಾಖಲಾಗಿದ್ದು, ಕನಿಷ್ಠ ಒಂದು ಹೆಕ್ಟೇರ್ ಬೆಳೆ ಹಾನಿಗೊಂಡ ಪ್ರತಿ ರೈತನ ಖಾತೆಗೆ ರೂ. 8,500 ಪರಿಹಾರ ಮೊತ್ತ ನೇರವಾಗಿ ಜಮೆ ಆಗಲಿದೆ. ಪರಿಹಾರದ ಮೊತ್ತ ಹತ್ತು ದಿನಗಳಲ್ಲಿ ರೈತರ ಖಾತೆಗೆ ವರ್ಗಾಯಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
“ಅತಿವೃಷ್ಟಿಯಿಂದ ಹಾನಿಗೊಂಡ ರೈತರ ಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಿರುವುದು ರೈತರ ಬದುಕಿಗೆ ಸ್ಪಂದನೆಯಾಗಿದೆ,”-ಶರಣು ಡೋಣಗಾಂವ.

