Oplus_0

ಚಿತ್ತಾಪುರ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಭೆ | ನಾಲವಾರದಲ್ಲಿ ಹತ್ತಿ ಖರೀದಿ ಕೇಂದ್ರ ಸ್ಥಾಪನೆಗೆ: ಪರಸರೆಡ್ಡಿ ಒತ್ತಾಯ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ನಾಲವಾರ ವಲಯದಲ್ಲಿ ರೈತರು ಅತಿಹೆಚ್ಚು ಹತ್ತಿ ಬೆಳೆಯುತ್ತಾರೆ. ಆದ್ದರಿಂದ ಸರ್ಕಾರ ನಾಲವಾರದಲ್ಲಿ ಹತ್ತಿ ಕೇಂದ್ರ ಸ್ಥಾಪಿಸಬೇಕು ಎಂದು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ವೀರಣ್ಣಗೌಡ ಪರಸರೆಡ್ಡಿ ಒತ್ತಾಯಿಸಿದರು.

ಪಟ್ಟಣದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹತ್ತಿ ಬೆಳೆಯದ ಶಹಾಬಾದ-ತೋನಸನಳ್ಳಿಯಲ್ಲಿ ಹತ್ತಿ ಖರೀದಿ ಕೇಂದ್ರ ತೆರೆದಿರುವುದು ಅವೈಜ್ಞಾನಿಕವಾಗಿದೆ ಎಂದರು.

ನಾಲವಾರ ವಲಯದಲ್ಲಿ ಹತ್ತಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗಲಿದೆ. ನಾಲವಾರದಲ್ಲಿನ ಕೃಷಿ ಉತ್ಪನ್ನ ಕೇಂದ್ರ ಮುಚ್ಚುವ ಹುನ್ನಾರ ನಡೆದಿದೆ ಎಂಬ ಅನುಮಾನ ಬರುತ್ತಿದೆ. ಕೇಂದ್ರದ ಮುಂದಾಳು ಹುದ್ದೆಯಲ್ಲಿನ ಅಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಕೂಡಲೇ ಮುಂದಾಳು ಹುದ್ದೆ ಸೇರಿದಂತೆ ಕೃಷಿ ವಿಜ್ಞಾನಿಗಳ ಹಾಗೂ ಸಿಬ್ಬಂದಿಗಳ ನೇಮಕ ಮಾಡಿ ಕೃಷಿ ಶಿಕ್ಷಣ ಉತ್ಪನ್ನ ಕೇಂದ್ರ ಆರಂಭಿಸಬೇಕು. ನಿರ್ಲಕ್ಷವಹಿಸಿದರೆ ಕೃಷಿಕ ಸಮಾಜದ ನಿರ್ದೇಶಕರ ನಿಯೋಗ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ಭೇಟಿಯಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಕೆಲ ಮುಗ್ಧ ರೈತರು ಎಫ್ ಡಿಎ ಮಾಡಿಸದೇ ಇರುವುದರಿಂದ ಸರ್ಕಾರದ ಬೆಳೆ ಹಾನಿ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಕೂಡಲೇ ಸರ್ಕಾರ ಅವರಿಗೆ ಪರಿಹಾರ ನೀಡಬೇಕಂದು ಒತ್ತಾಯಿಸಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಠಿ ಗೋಪಶೇನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತೊಗರಿ ಬೆಳೆಗೆ 12,500 ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿಸಬೇಕು. ಮೂರು ವರ್ಷಕ್ಕೊಮ್ಮೆ ರೈತರಿಗೆ ನೀಡುವ ತಾಡಪತ್ರಿಗಳು ಪ್ರತಿ ವರ್ಷವೂ ನೀಡಬೇಕು. ಪಂಜಾಬನಿಂದ ಇಲ್ಲಿಗೆ ಬಂದು ರೈತರ ಬೆಳೆಗಳ ರಾಶಿ ಮಾಡುತ್ತಾರೆ. ಆದರೆ ಸರಿಯಾದ ಸಮಯಕ್ಕೆ ರೈತರಿಗೆ ಸರ್ಕಾರ ರಾಶಿಗಳ ಯಂತ್ರೋಪಕರಣಗಳು ನೀಡಿದರೇ ರೈತರು ತಾವೇ ರಾಶಿ ಮಾಡಿಕೊಳ್ಳುತ್ತಾರೆ ಎಂದರು.

ಕೃಷಿ ನಿರ್ದೇಶಕ ಬಾಬು ಕಾಶಿ ಮಾತನಾಡಿ, ಸಣ್ಣ ರೈತರಿಗೆ 10-20 ಕುರಿಗಳು, ಎಮ್ಮೆಗಳ ಸಾಕಾಣಿಕೆಗೆ ಅನುಕೂಲ ಮಾಡಿಕೊಡಬೇಕೆಂದರು.

ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರೆ ಮಾತನಾಡಿ, ಚಿತ್ತಾಪುರದಲ್ಲಿ ಡಿಸೆಂಬರ 23 ರಂದು ರೈತರ ದಿನಾಚರಣೆ ಮಾಡಲಾಗುವುದು. ಮಳೆ ಆಶ್ರಿತ ಬೆಳೆದ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.

ತಾಲೂಕು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶಂಕರ ಕಣ್ಣಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಗೋವಿನ, ಅರಣ್ಯ ಇಲಾಖೆಯ ಅಧಿಕಾರಿ ಎಂ.ಡಿ ಜಾವೇದ, ತಾಲೂಕು ಕೃಷಿಕ ಸಮಾಜದ ಖಜಾಂಚಿ ನಿಂಗಣ್ಣ ಹೇಗಲೇರಿ, ನಿರ್ದೇಶಕರಾದ ಸತ್ಯನಾರಾಯಣ ಯಾದವ, ಶಿವಶರಣರೆಡ್ಡಿ ಭಂಕಲಗಿ, ಪಂಚಾಕ್ಷರಿ ಪೂಜಾರಿ, ಉಪಾಧ್ಯಕ್ಷ ಚನ್ನಬಸಪ್ಪ ಜೀವಣಗಿ, ಪ್ರಧಾನ ಕಾರ್ಯದರ್ಶಿ ನಿಂಗಣ್ಣಗೌಡ ಬಿರಾದಾರ, ಸುಭಾಶ್ಚಂದ್ರ ಅಮ್ಮೋಜಿ, ಕುಮಾರ ರಾಮಚಂದ್ರ, ರವೀಂದ್ರ ದೇವಿಂದ್ರಪ್ಪ, ಮಲ್ಲಿಕಾರ್ಜುನ ಅಣ್ಣಾರಾಯ, ಚನ್ನಬಸಪ್ಪಗೌಡ ಭಾಗಣ್ಣಗೌಡ, ಕೃಷಿ ಇಲಾಖೆಯ ಅಧಿಕಾರಿ ರವೀಂದ್ರಕುಮಾರ, ಪುರಸಭೆಯ ಲೋಹಿತ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!