ಚಿತ್ತಾಪುರದಲ್ಲಿ ಶಾಂತಿ ಸಭೆ | ಬಕ್ರೀದ್ ಹಬ್ಬವನ್ನು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಆಚರಿಸಿ: ಶಂಕರಗೌಡ ಪಾಟೀಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಕ್ರೀದ್ ಹಬ್ಬವನ್ನು ಎಲ್ಲರೂ ಶಾಂತಿ ಸೌಹಾರ್ದತೆ ಹಾಗೂ ಸಹೋದರತ್ವದ ಭಾವನೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ (ಮೇ.28 ರಂದು) ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಆಡಳಿತದ ಜೊತೆಗೆ ಸಾರ್ವಜನಿಕರು ಅವರವರ ಜವಾಬ್ದಾರಿ ಸರಿಯಾಗಿ ನಿರ್ವಹಿಸಿದಾಗ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.
ಯಾವುದೇ ಘಟನೆ ಅಥವಾ ಅಕ್ರಮದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ, ನೈತಿಕ ಪೊಲೀಸ್ ಗಿರಿಗೆ ಅವಕಾಶ ಇಲ್ಲ, ನಾವು ಮಾಡುವ ಕೆಲಸ ನೀವು ಮಾಡಿದರೆ ಆಗ ನಮ್ಮ ಕೆಲಸ ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡಲು ಪಿಡಿಒಗಳಿಗೆ ಸೂಚಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಹಾಗೂ ಪಟ್ಟಣದ ಸ್ವಚ್ಛತೆಗೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು. ಕಾನೂನಿಗೆ ಗೌರವ ನೀಡುವ ಮೂಲಕ ಕಾನೂನು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಭಾರತ ದೇಶದಲ್ಲಿ ಹಬ್ಬಗಳನ್ನು ಎಲ್ಲರೂ ಶಾಂತಿ ಸೌಹಾರ್ದತೆ ಹಾಗೂ ಸಂಭ್ರಮದಿಂದ ಆಚರಿಸಬೇಕು. ಈ ನಿಟ್ಟಿನಲ್ಲಿ ಬಕ್ರೀದ್ ಹಬ್ಬದ ಆಚರಣೆಗೆ ದಕ್ಕೆ ಬಾರದಂತೆ ಹಾಗೂ ಯಾರೂ ಕಾನೂನು ಮೀರದಂತೆ ಜಾಗ್ರತೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಅಕ್ರಂ ಪಾಷಾ, ಸಿಪಿಐ ಸಿದ್ದಬಸವನಗೌಡ ಪಾಟೀಲ, ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ.ಶಂಕರ ಕಣ್ಣಿ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಅಲ್ಪಸಂಖ್ಯಾತರ ಮುಖಂಡ ಮುಕ್ತಾರ್ ಪಟೇಲ್, ಪುರಸಭೆ ಮಾಜಿ ಅಧ್ಯಕ್ಷರಾದ ನಾಗರಾಜ ಭಂಕಲಗಿ, ಚಂದ್ರಶೇಖರ ಕಾಶಿ, ಕಲಾವಿದ ಬಾಬು ಕಾಶಿ ಅವರು ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಮುಖಂಡರಾದ ಶ್ರೀನಿವಾಸ ರೆಡ್ಡಿ ಪಾಲಪ್, ನಾಗರಾಜ ರೇಷ್ಮಿ, ಮಲ್ಲಿಕಾರ್ಜುನ ಪೂಜಾರಿ, ಭೀಮಣ್ಣ ಕರದಳ್ಳಿ, ಅನೀಲ್ ವಡ್ಡಡಗಿ, ಉದಯಕುಮಾರ್ ಸಾಗರ, ದಶರಥ ದೊಡ್ಡಮನಿ, ಭೀಮಸಿಂಗ ಚವ್ಹಾಣ, ನಾಗೇಂದ್ರ ಬುರ್ಲಿ, ನಜೀರ್ ಆಡಕಿ, ಕೋಟೇಶ್ವರ ರೇಷ್ಮಿ, ನಾಗೇಂದ್ರ ಡಿಗ್ಗಿ, ಸದ್ದಾಂ ಕರದಾಳ, ಗಂಗಾಧರ ಮಳಖೇಡ, ದೇವಿದಾಸ ಚವ್ಹಾಣ, ಹಣಮಂತ ಕಟ್ಟಿಮನಿ, ಮಹ್ಮದ್ ಯಕ್ಬಾಲ್, ಫಾರೂಖ್ ಪಟೇಲ್, ಮುಜೀಬ್ ಜುನೈದಿ, ಸುಭಾಷ್ ಜಾಧವ ಸೇರಿದಂತೆ ಇತರರು ಇದ್ದರು. ಪಿಎಸ್ಐ ಮಂಜುನಾಥ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಎಸ್ಐ ಬಾಬು ಇಂಚಗೇರಿ ನಿರೂಪಿಸಿದರು.

