ಶ್ರೀ ಸಿಮೆಂಟ್ ಕಂಪನಿಯ ಅಧಿಕಾರಿಗಳ ಭರವಸೆಯಿಂದ ಅಹೋರಾತ್ರಿ ಧರಣಿ ಹಿಂತೆಗೆದುಕೊಂಡ ರೈತರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಸಮೀಪದ ಶ್ರೀ ಸಿಮೆಂಟ್ ಕಂಪನಿಯ ಕ್ಲಿಂಕರ್ ಸಾಗಾಟ ಘಟಕದಿಂದ ದೂಳು ಹರಡಿ ಹಾಳಾಗುತ್ತಿರುವ 200 ಎಕರೆ ಪ್ರದೇಶದ ಬೆಳೆಗಳಿಗೆ ಪರಿಹಾರ ಹಾಗೂ ಹೊಲಗಳಿಗೆ ಹೋಗಲು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಶ್ರೀ ಸಿಮೆಂಟ್ ಕಂಪನಿಯ ವಿರುದ್ಧ ರೊಚ್ಚಿಗೆದ್ದ ರೈತರು ಮಂಗಳವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ಪ್ರಾರಂಭ ಮಾಡಿದ್ದರು. ಈ ವಿಷಯವನ್ನು ಅರಿತ ಕಂಪನಿಯ ಅಧಿಕಾರಿಗಳು ಬುಧವಾರ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆಗಳ ಈಡೇರಿಸುವ ಕುರಿತು ಭರವಸೆ ನೀಡಿದ್ದರಿಂದ ರೈತರು ಅಹೋರಾತ್ರಿ ಧರಣಿ ಹಿಂತೆಗೆದುಕೊಂಡರು.
ರೈತ ಮುಖಂಡ ರಮೇಶ್ ಬೊಮ್ಮನಳ್ಳಿ ಮಾತನಾಡಿ, ತಾಲೂಕಿನ ಸೂಲಹಳ್ಳಿ ಸ್ಟೇಷನ್ ಹತ್ತಿರದ ಶ್ರೀ ಸಿಮೆಂಟ್ ಕಂಪನಿಯ ರೈಲ್ವೆ ಕಾಮಗಾರಿಯಿಂದ ರೈತರ ಹೊಲಗಳಿಗೆ ಹಾನಿಯಾಗುತ್ತಿದ್ದು ಹಾಗೂ ಮೂಲ ರಸ್ತೆಯ ಸರ್ಕಾರಿ ಹಣಾದಿಗಳು ಒತ್ತುವರಿ ಮಾಡಿ ರೈಲ್ವೆ ಹಳಿ ಹಾಕಿ ರೈತರಿಗೆ ಆಚೆ ಹೋಗಿ ಬರಲು ರಸ್ತೆ ಕೊಡದೆ ಇರುವ ಕಾರಣ ತೊಂದರೆಯಾಗಿತ್ತಿದೆ. ಈ ವರ್ಷ ಮಳೆ ಹೆಚ್ಚಾದ ಕಾರಣ ಇವರು ಈಗಾಗಲೇ ಕೊಟ್ಟ ಮಾತಿನಂತೆ ರಸ್ತೆಯ ಎರಡು ಬದಿಯಲ್ಲಿ ನಾಲೆಗಳನ್ನು ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದು, ಅದು ಇನ್ನೂ ಈಡೇರಿಸಿಲ್ಲ ಅದರಿಂದ ಮಳೆ ನೀರು ನಮ್ಮ ಹೊಲಗಳಲ್ಲಿ ನುಗ್ಗಿ ತುಂಬಾ ನಷ್ಟ ಅನುಭವಿಸುತ್ತಿದ್ದೇವೆ ಹಾಗೂ ಕಂಪನಿಯವರು ಈ ಮೊದಲು ನಾವು ಕೊಟ್ಟ ಮನವಿಗೆ ಸ್ಪಂದಿಸಿ ರಸ್ತೆ, ಮೂಲ ಹಾಣಾದಿಗಳಿಂದ ರೈಲ್ವೆ ಹಳಿಯ ಆಚೆಗೆ ಹೋಗಲು ರಸ್ತೆಯನ್ನು ಮಾಡಿಕೊಡುವುದಾಗಿ ಲಿಖಿತ ರೂಪದಲ್ಲಿ ಬರೆದು ಕೊಟ್ಟಿದ್ದು ಆ ಕೆಲಸವನ್ನು ಕೂಡ ಇನ್ನೂ ಮಾಡಿರುವುದಿಲ್ಲ ಎಂದು ಹೇಳಿದರು.
ಇದಕ್ಕೆ ಸ್ಪಂದಿಸಿದ ಕಂಪನಿ ಅಧಿಕಾರಿಗಳು, ಹೊಲಗಳಿಗೆ ಹೋಗಲು ರಸ್ತೆ ಹಾಗೂ ನಾಲೆ ನಿರ್ಮಾಣ ಮಾಡಲಾಗುವುದು, ಬೆಳೆ ಹಾನಿ ಪರಿಹಾರ ಕೃಷಿ ಇಲಾಖೆಯ ವರದಿ ಬರುತ್ತಿದ್ದಂತೆಯೇ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತರಾದ ಕಂಪೆನಿ ಅಧಿಕಾರಿಗಳಾದ ನರಸಿಂಗ್, ರಮನಾಗೌಡ, ಕಂದಾಯ ನಿರೀಕ್ಷಕ ಮೈನೋದ್ದಿನ್, ರೈತರಾದ ನಾಗರಾಜ ರೇಷ್ಮಿ, ಮಲ್ಲಿಕಾರ್ಜುನ ರೆಡ್ಡಿ ಆಲೂರ, ಸಿದ್ದು ರೇಷ್ಮಿ, ರವಿ ಗಂಗಾಣಿ, ಅಂಬು ತಿಮ್ಮಯ್ಯ ಭೋವಿ ಸೇರಿದಂತೆ ಇತರರು ಇದ್ದರು.

