ಚಿತ್ತಾಪುರ ಪಿಎಲ್’ಡಿ ಬ್ಯಾಂಕಿನ ಅಧ್ಯಕ್ಷ ಭೀಮಣ್ಣ ಸಾಲಿ ಗೆ ಮಾಜಿ ಅಧ್ಯಕ್ಷ ಮಲ್ಲಿನಾಥ ಇಂದೂರ ತಿರುಗೇಟು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಿಎಲ್’ಡಿ ಬ್ಯಾಂಕಿನ ಈಗಿನ ಅಧ್ಯಕ್ಷ ಭೀಮಣ್ಣ ಸಾಲಿ ಅವರು ಇನ್ನೂ ಬ್ಯಾಂಕಿನ ಮೆಟ್ಟಿಲು ಹತ್ತಿಲ್ಲ ಈಗಲೇ 30 ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಕೇಳುತ್ತಿರುವುದು ಹಾಸ್ಯಾಸ್ಪದ ಸಂಗತಿ. ಬ್ಯಾಂಕ್ ಏನು ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಮಾಜಿ ಅಧ್ಯಕ್ಷ ಮಲ್ಲಿನಾಥ ಇಂದೂರ ತಿರುಗೇಟು ನೀಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಬಗ್ಗೆ ಅನುಭವವೇ ಇಲ್ಲದ ಭೀಮಣ್ಣ ಸಾಲಿ ಬ್ಯಾಂಕಿನ ಬಗ್ಗೆ ಮಾತನಾಡುತ್ತಿದ್ದಾರೆ ಮೊದಲು ಬ್ಯಾಂಕ್ ಬಗ್ಗೆ ಅರಿತುಕೊಂಡು ನಂತರ ಮಾತನಾಡಲಿ ಎಂದು ಕಿವಿಮಾತು ಹೇಳಿದರು.
ಪಿಎಲ್’ಡಿ ಬ್ಯಾಂಕಿಗೆ ಈಚೇಗೆ ನಡೆದ ಚುನಾವಣೆ ಕಾನೂನು ಬಾಹಿರವಾಗಿ ನಡೆದಿದೆ ಈ ಕುರಿತು ಸಹಕಾರ ಇಲಾಖೆಯ ಜಂಟಿ ಉಪ ನಿಬಂಧಕರಿಗೆ ದೂರು ನೀಡಲಾಗಿದೆ ಎಂದರು.
ಸಹಕಾರ ನಿಯಮಗಳನ್ನು ಉಲ್ಲಂಘಿಸಿ ಅಧಿಕಾರಿಗಳು ಚುನಾವಣೆ ನಡೆಸಿದ್ದಾರೆ. 6 ಸಾವಿರ ಸದಸ್ಯರಿದ್ದಾರೆ ಅದರಲ್ಲಿ 450 ಸದಸ್ಯರು ಅರ್ಹತೆ ಪಡೆದವರು ಆದರೆ ಸಾಮಾನ್ಯ ಸಭೆಯಲ್ಲಿ 19 ಸದಸ್ಯರು ಮಾತ್ರ ಹಾಜರಿದ್ದಿದ್ಜರು, ಅಲ್ಲದೇ ಸದಸ್ಯನಲ್ಲದ ನಾಗರೆಡ್ಡಿ ಪಾಟೀಲ ಕರದಾಳ ಹಾಜರಿದ್ದರು ಅವರನ್ನು ಹೊರಗೆ ಕಳುಹಿಸಲಿಲ್ಲ, ಆಡಳಿತಾಧಿಕಾರಿ ಮಲ್ಲಿಕಾರ್ಜುನ ಛಲವಾದಿ ಅವರು ನಡವಾಳಿ ಬುಕ್ ನಾಗರೆಡ್ಡಿ ಪಾಟೀಲ ಮನೆಗೆ ತೆಗೆದುಕೊಂಡು ಹೋಗುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ. ಇಲ್ಲಿ ಸತ್ತವರ ಹೆಸರಿನ ಮೇಲೆಯೂ ಶುಲ್ಕ ಭರಿಸಿ ಸದಸ್ಯರಾಗಿ ಮಾಡಿದ್ದಾರೆ ಅಲ್ಲದೇ ನಿಜವಾಗಿಯೂ ಸದಸ್ಯರಾರು ಶುಲ್ಕ ಭರಿಸಿ ಸದಸ್ಯರಾಗಿಲ್ಲ ಕಾಂಗ್ರೆಸ್ ಮುಖಂಡ ಚಂದ್ರಶೇಖರ ಸಾತನೂರು ಅವರೊಬ್ಬರೇ ಬಹುತೇಕರ ಶುಲ್ಕ ಪಾವತಿಸಿ ಸದಸ್ಯರನ್ನಾಗಿ ಮಾಡಿಸಿದ್ದಾರೆ ಎಂದು ದೂರಿದರು.
ನನ್ನ ಅವಧಿಯಲ್ಲಿ ಪಿಎಲ್’ಡಿ ಬ್ಯಾಂಕ್ ಸಾಲ ಕೊಡುವುದರಲ್ಲಿ ಹಾಗೂ ಸಾಲ ವಸೂಲಾತಿ ಮಾಡುವುದರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಈಗ ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದೆ ಇದು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು.
ಪಿಎಲ್’ಡಿ ಬ್ಯಾಂಕ್ ಚುನಾವಣೆಯಲ್ಲಿ ನಾವು 30 ವರ್ಷದ ಅವಧಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತ ರಾಜಕೀಯ ಮಾಡಿಲ್ಲ ಪಕ್ಷಾತೀತವಾಗಿ ಎಲ್ಲ ರೈತರಿಗೂ ಅನುಕೂಲ ಮಾಡಿಕೊಟ್ಟಿದ್ದೇವೆ ಹಾಗೂ 400 ಕ್ಕಿಂತ ಅಧಿಕ ರೈತರಿಗೆ ಸಾಲ ಸೌಲಭ್ಯ ಹಾಗೂ ಟ್ರಾಕ್ಟರ್ ಸೌಲಭ್ಯ ನೀಡಲಾಗಿದೆ ಎಂದು ಹೇಳಿದರು. ಆದರೆ ಈಗಿನ ಅಧ್ಯಕ್ಷರು ಕಾಂಗ್ರೆಸ್ ರಾಜಕೀಯ ಮಾಡುತ್ತಿದ್ದಾರೆ ಎಂದರು.
ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ಷೇತ್ರಗಳನ್ನು ಮಾಡಿಕೊಂಡು ಚುನಾವಣೆ ಮಾಡಿದ್ದಾರೆ ನನ್ನ ಕಮರವಾಡಿ ಕ್ಷೇತ್ರವನ್ನು ಎಸ್ಟಿ ಮಾಡಿದ್ದಾರೆ ಒಂದು ವೇಳೆ ಸಾಮಾನ್ಯ ಮಾಡಿದ್ದರೆ ನನ್ನ ತಾಕತ್ ತೋರಿಸುತ್ತಿದ್ದೆ ಎಂದು ಕುಟುಕಿದರು. ಕಾಂಪೌಂಡ್ ಕಾಮಗಾರಿಗೆ 6 ಲಕ್ಷ ಮೀಸಲಿಡಲಾಗಿದೆ ಹಾಗೂ 10 ಲಕ್ಷ ಎಪ್.ಡಿ ಇಡಲಾಗಿದೆ ಹಾಗೂ 1.50 ಕೋಟಿ ಅನುದಾನ ಇದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾತನಾಡಿ, ಸಚಿವರ ಕೈಗೊಂಬೆಯಾಗಿ ಅಧಿಕಾರಿಗಳು ಕಾನೂನು ಬಾಹಿರವಾಗಿ ಪಿಎಲ್’ಡಿ ಬ್ಯಾಂಕ್ ಚುನಾವಣೆ ನಡೆಸಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಶಿವರಾಮ ಚವ್ಹಾಣ ಇದ್ದರು.

