ಚಿತ್ತಾಪುರ ಮುಂಗಾರು ಹಂಗಾಮಿನ ಸಭೆ, ಕಾಳಸಂತೆಯಲ್ಲಿ ರಸಗೊಬ್ಬರ ಮಾರಿದರೆ ಪರವಾನಿಗೆ ರದ್ದು: ಸಂಜೀವಕುಮಾರ ಮಾನಕರ್ ಎಚ್ಚರಿಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಾಳಸಂತೆಯಲ್ಲಿ ರಸಗೊಬ್ಬರ ಮಾರಿದರೆ ಪರವಾನಿಗೆ (ಲೈಸೆನ್ಸ್) ಪತ್ರ ರದ್ದುಗೊಳಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್ ಎಚ್ಚರಿಕೆ ನೀಡಿದರು.
ಚಿತ್ತಾಪುರದಲ್ಲಿ ರಸಗೊಬ್ಬರ ಕೊರತೆ ರೈತರ ಪರದಾಟ ಶೀರ್ಷಿಕೆಯ ಸುದ್ದಿ ನಾಗಾವಿ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಗುರುವಾರ ಬಿತ್ತರವಾದ ಪರಿಣಾಮ ಸಹಾಯಕ ಕೃಷಿ ನಿರ್ದೇಶಕರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಚಿತ್ತಾಪುರ, ಕಾಳಗಿ ಹಾಗೂ ಶಹಾಬಾದ ತಾಲೂಕುಗಳ ಕೃಷಿ ಪರಿಕರ ಮಾರಾಟಗಾರರ (ಡೀಲರ್ಸ್) 2025-26ನೇ ಸಾಲಿನ ಮುಂಗಾರು ಹಂಗಾಮಿನ ಶುಕ್ರವಾರ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಕಡ್ಡಾಯವಾಗಿ ಪ್ರತಿದಿನ ಬೌತಿಕ ದಾಸ್ತಾನು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು, ಕಡ್ಡಾಯವಾಗಿ ರೈತರಿಗೆ ಅಧಿಕೃತ ರಸೀದಿಯನ್ನು ನೀಡಬೇಕು, ಹೆಚ್ಚಿನ ದರದಲ್ಲಿ ಕೃಷಿ ಪರಿಕರಗಳನ್ನು ಮಾರಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕೃತಕವಾಗಿ ರಸಗೊಬ್ಬರ ಅಭಾವವನ್ನು ಸೃಷ್ಟಿಸಿದರೆ ಕ್ರಮ ಜರುಗಿಸಲಾಗುವುದು, ರೈತರಿಗೆ ನೇರ ರಸಗೊಬ್ಬರ ಬದಲಿಗೆ ಸಂಯುಕ್ತ ರಾಸಾಯನಿಕ ಗೊಬ್ಬರ ಬಳಕೆಗೆ ಉತ್ತೇಜನ ನೀಡಬೇಕೆಂದು ಕಿವಿಮಾತು ಹೇಳಿದರು.
ವಿತರಕರು ಕಡ್ಡಾಯವಾಗಿ ಮಳಿಗೆಗಳ ಮುಂದೆ, ರಸಗೊಬ್ಬರ ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ದರ ಪಟ್ಟಿಯನ್ನು ಕಾಣುವಂತೆ ಪ್ರದರ್ಶಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಸೂಚಿಸಿದರು.
ಸಭೆಯಲ್ಲಿ ಕೃಷಿ ಅಧಿಕಾರಿಗಳಾದ ರವೀಂದ್ರಕುಮಾರ, ಶ್ರೀನಿವಾಸ್ ಬಿಟಿಎಂ, ಸಚಿನ್ ಕುಮಾರ್, ಕೃಷಿ ಸಂಜೀವಿನಿ ಸಿಬ್ಬಂದಿ ನಾಗವೇಣಿ, ಹಾಗೂ ಚಿತ್ತಾಪುರ ಕಾಳಗಿ ಹಾಗೂ ಶಹಾಬಾದ ತಾಲೂಕುಗಳ ಕೃಷಿ ಪರಿಕರಗಳ ಮಾರಾಟಗಾರರು ಉಪಸ್ಥಿತರಿದ್ದರು.