ಬೆಳೆ ಪರಿಹಾರದಲ್ಲಿ ಕಮರವಾಡಿ ರೈತರಿಗಾದ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬೆಳೆ ಪರಿಹಾರದಲ್ಲಿ ಕಮರವಾಡಿ ಗ್ರಾಮದ ರೈತರಿಗೆ ಅನ್ಯಾಯವಾಗಿದ್ದು ಸರಿಪಡಿಸುವಂತೆ ಆಗ್ರಹಿಸಿ ರೈತ ಮುಖಂಡರು ಶನಿವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅತಿಯಾದ ಮಳೆಯಿಂದಾಗಿ ಬೆಳೆದ ಬೆಳೆ ನೀರಿನಲ್ಲಿ ಮುಳುಗಡೆಯಾಗಿ ತೀವ್ರ ಸಂಕಷ್ಟ ಅನುಭವಿಸಿದ್ದ ತಾಲೂಕಿನ ಕಮರವಾಡಿ ಗ್ರಾಮದ ರೈತರಿಗೆ ಸರ್ಕಾರದ ಪರಿಹಾರದಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಗ್ರಾಮದ ರೈತ ಮುಖಂಡರು ಆರೋಪಿಸಿದರು.
ಗ್ರಾಮದ ಹಿರಿಯ ಮುಖಂಡ ಅಣ್ಣಪ್ಪಗೌಡ ಪೊಲೀಸ್ ಪಾಟೀಲ ಮಾತನಾಡಿ, ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ನಮ್ಮೂರಿನ ರೈತರಿಗೆ ಅನ್ಯಾಯವಾಗಿದೆ. ಪಾರದರ್ಶಕವಾಗಿ ಸರ್ವೆ ಕಾರ್ಯ ನಡೆಯದಿರುವ ಕಾರಣದಿಂದಾಗಿ ಪರಿಹಾರದ ಹಣ ವಿತರಣೆಯಲ್ಲಿ ತಾರತಮ್ಯ ಆಗಿದೆ. ಹೆಸರು, ಉದ್ದು ತೊಗರಿ ಬೆಳೆ ಅತಿಯಾದ ಮಳೆಗೆ ಜಲಾವೃತಗೊಂಡು ಹಾಳಾಗಿ ಹೋಗಿ ರೈತನ ಗೋಳಾಟಕ್ಕೆ ಕಾರಣವಾಗಿದೆ. ಸಾಲಸುಲಾ ಮಾಡಿ ಹಾಕಲಾದ ಬಂಡವಾಳ ಕೈ ಸೇರದೆ ಸಾಲದ ಸುಳಿಗೆ ರೈತ ಸಿಲುಕಿ ಕೊಂಡಿದ್ದಾನೆ. ಸರ್ಕಾರದ ಕನಿಷ್ಠ ಪರಿಹಾರವನ್ನು ರೈತರಿಗೆ ದೊರಕದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೂಡಲೇ ರೈತರಿಗಾದ ಅನ್ಯಾಯವನ್ನು ಸರಿಪಡಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.
ಮುಖಂಡರಾದ ಶಿವಶರಣಪ್ಪ ಶಿರವಾಳ, ದೇವಪ್ಪಗೌಡ ಪಾಟೀಲ ಖ್ಯಾಮನೊರ್, ರಹೇಮಾನಸಾಬ್ ಬಾಂಬೆ, ಶಿವಶರಣಪ್ಪ ಯರಗಲ್, ಸಂಗಣ್ಣಗೌಡ ಶಿರವಾಳ, ಶಿವಲಿಂಗಪ್ಪ ಶಿರವಾಳ, ದ್ಯಾವಣ್ಣ ತಳವಾರ್, ಇಸಪ್ಪಗೌಡ ಪೊಲೀಸ್ ಪಾಟೀಲ್, ಗಣೇಶ್ ಗುತ್ತೇದಾರ್, ಮಹೇಬೂಬ್ ಮುಲ್ಲಾ, ಬಸ್ಸುಗೌಡ ಮಾಲಿ ಪಾಟೀಲ್, ಜಿಲಾನಿ ಮುಲ್ಲಾ, ಮಲ್ಲಪ್ಪ ಮಾಂಗ್, ನರಸಪ್ಪ ಮಾಂಗ್, ಸಜ್ಜನು ಮೌಳಿತಾಂಡಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರೈತರಿಗಾಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ರೈತರಿಗೆ ಭರವಸೆ ನೀಡಿದರು.

