ಕೇಂದ್ರ ಬಜೆಟ್ ವಿರೋಧಿಸಿ ಶಹಾಬಾದ ನಗರದಲ್ಲಿ ಅಂಗನವಾಡಿ ನೌಕರರು ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: 2026-27ರ ಕೇಂದ್ರ ಬಜೆಟ್ನಲ್ಲಿ 26 ಲಕ್ಷ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರು ಸೇರಿದಂತೆ ಒಂದು ಕೋಟಿ ಯೋಜನಾ ಕಾರ್ಯಕರ್ತೆಯರ ಸಂಕಷ್ಟ ಮತ್ತು ಹಕ್ಕುಗಳ ಮಾರಣಾಂತಿಕ ಮೌನವನ್ನು ಬಲವಾಗಿ ಖಂಡಿಸುತ್ತೇವೆ ಎಂದು ಅಂಗನವಾಡಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಶೇಖಮ್ಮ ಕುರಿ ಹೇಳಿದರು.
ನಗರದ ನೆಹರು ವೃತ್ತದಲ್ಲಿ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ವತಿಯಿಂದ ಹಮ್ಮಿಕೊಂಡ ಕೇಂದ್ರದ ಬಜೆಟ್ ವಿರುದ್ಧ ಖಂಡಿಸಿ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಐಸಿಡಿಎಸ್, ಶಾಲಾ ಮಧ್ಯಾಹ್ನದ ಊಟ ಯೋಜನೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ನಂತಹ ಮೂಲಭೂತ ಸೇವಾ ಯೋಜನೆಗಳಲ್ಲಿನ ಮೂಲಸೌಕರ್ಯ ಮತ್ತು ಸೇವೆಗಳ ಗುಣಮಟ್ಟದ ಬಗ್ಗೆ ಬಜೆಟ್ ನಲ್ಲಿ ಮೌನವಾಗಿಸಲಾಗಿದೆ, ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತೇವೆ ಎಂದು ಹೇಳುವ ಭಾರತ ಸರ್ಕಾರ, ತಳಮಟ್ಟದ ಕಾರ್ಯಕರ್ತರ ಸಂಭಾವನೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ, ಯೋಜನಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಅಥವಾ ಪಿಂಚಣಿ ಇಲ್ಲ, ಗ್ರಾಚ್ಯುಟಿ ನೀಡುವ 2022 ರ ಸುಪ್ರೀಂ ಕೋರ್ಟ್ ಆದೇಶವನ್ನು ಸಹ ಸರ್ಕಾರವು ಇನ್ನೂ ಜಾರಿಗೆ ತಂದಿಲ್ಲ, ಅಂಗನವಾಡಿ ಯೋಜನೆಯು 2025ಕ್ಕೆ 50 ವರ್ಷಗಳನ್ನು ಪೂರೈಸಿದೆ, 3.38 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, 4.61 ಲಕ್ಷ ಕೇಂದ್ರಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಅಂಗನವಾಡಿ ನೌಕರರ ಸಂಘದ ವತಿಯಿಂದ ಕೇಂದ್ರದ ವಿರುದ್ದ ಘೋಷಣೆ ಕೂಗಿ ಸರ್ಕಾರ ಮಂಡಿಸಿದ ಬಜೆಟ್ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಮೈತ್ರಾಬಾಯಿ ತಳವಾರ, ಅಂಬುಜಾ, ರುದ್ರಮ್ಮ, ಸುವರ್ಣ, ರಂಜೀತಾ, ಗುಜ್ಜಮ್ಮ ಹಾಗೂ ನಾಗಪ್ಪ ರಾಯಚೂರಕರ್ ಸೇರಿದಂತೆ ಅನೇಕ ಅಂಗನವಾಡಿ ನೌಕರರು ಭಾಗವಹಿಸಿದ್ದರು.

