ಲುಂಬಿನಿ ವನದಲ್ಲಿ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ | ವನ್ಯಜೀವಿಗಳಿಂದ ಮಾತ್ರ ಜಗದ ಉಳಿವು: ಬಡಿಗೇರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಜಗದ ಉಳಿವು ವನ್ಯಜೀವಿಗಳನ್ನು ಅವಲಂಬಿಸಿವೆ. ಅವುಗಳ ನಾಶವಾದರೆ ನಮಗೆ ಉಳಿಗಾಲವಿಲ್ಲ ಎಂದು ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ಹೇಳಿದರು.
ಅವರು ಪ್ರಾದೇಶಿಕ ಅರಣ್ಯ ವಿಭಾಗ ಕಲಬುರಗಿ, ಚಿತ್ತಾಪುರ ವಲಯ ಅರಣ್ಯ ವಿಭಾಗ ಹಾಗೂ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ವತಿಯಿಂದ ಗುಂಡಗುರ್ತಿ ಲುಂಬಿನಿ ಟ್ರಿ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಕೃತಿ ಒಂದು ಅದ್ಭುತ ಸೃಷ್ಟಿ ಅದರಲ್ಲಿ ಅರಣ್ಯಗಳು ಹಾಗೂ ವನ್ಯಜೀವಿಗಳ ಪಾತ್ರ ಪ್ರಮುಖವಾದದ್ದು. ಆದರೆ ಅನೇಕ ಕಾರಣಗಳಿಂದ ಅರಣ್ಯಗಳಲ್ಲಿರುವ ವನ್ಯಜೀವಿಗಳಿಗೆ ಆತಂಕ ಎದುರಾಗಿವೆ. ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಾಣಿಗಳು ಆಹಾರ ಸರಪಳಿಯಲ್ಲಿ ಒಂದು ಇನ್ನೊಂದನ್ನು ಆಶ್ರಯಿಸಿ ಬದುಕುತ್ತಿವೆ ಹೀಗಿರುವಾಗ ಪ್ರತಿಯೊಬ್ಬರೂ ಕಾಡು ಪ್ರಾಣಿಗಳನ್ನು ರಕ್ಷಿಸುವ ಸಂಕಲ್ಪ ಮಾಡಬೇಕು. ಅವುಗಳ ರಕ್ಷಣೆಯೇ ನಮ್ಮೇಲ್ಲರ ರಕ್ಷಣೆಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ, ಪ್ರತಿವರ್ಷ ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸಲು ಭಾರತೀಯ ವನ್ಯಜೀವಿ ಮಂಡಳಿಯು ದೇಶದಾದ್ಯಂತ ಅಕ್ಟೊಬರ್ 2 ರಿಂದ 8 ರವರೆಗೆ ವನ್ಯಜೀವಿ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದೆ. ಪರಿಸರದ ಜೊತೆಗೆ ವನ್ಯಜೀವಿಗಳ ರಕ್ಷಣೆ ನಮ್ಮೇಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಅರಣ್ಯಧಿಕಾರಿ ವಿಶ್ವನಾಥ ಪಾಟೀಲ್, ಏನ್. ಸಿ. ಸಿ ಅಧಿಕಾರಿ ಶರಣು ಸಜ್ಜನ್. ಟ್ರಿ ಪಾರ್ಕ್ ಸಿಬ್ಬಂದಿಗಳಾದ ಶ್ರೀಕಾಂತ, ನಾಗೇಶ್, ಜಾಫರ್ ಇದ್ದರು.
ಮಕ್ಕಳಿಗೆ ಅರಣ್ಯ, ವನ್ಯಜೀವಿಧಾಮಗಳ ಮಹತ್ವವನ್ನು ಹೇಳಿ ಕೊಡುವುದರ ಜೊತೆಗೆ ಅಲ್ಲಿರುವ ಚಿಟ್ಟೆ ಪಾರ್ಕ ಸೇರಿದಂತೆ ವಿವಿಧ ಸಸ್ಯಗಳ ಪ್ರಭೇಧಗಳು, ಪ್ರಾಣಿ ಪ್ರಭೇಧಗಳ ಬಗ್ಗೆ ಅರಣ್ಯಧಿಕಾರಿಗಳು ಮಾರ್ಗದರ್ಶನ ಮಾಡಿದರು. ಮಕ್ಕಳು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ, ಮನೋರಂಜನೆ ಜೊತೆಗೆ ಪರಿಸರದ ಅನೇಕ ವಿಷಯಗಳನ್ನು ಕೇಳಿ ತಿಳಿದುಕೊಂಡರು.
“ಲುಂಬಿನಿ ಟ್ರಿ ಪಾರ್ಕ್ ನಮ್ಮ ಭಾಗದಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಉತ್ತಮ ಜ್ಞಾನ ನೀಡುವ ಆಸಕ್ತಿಯ ತಾಣವಾಗಿ ನಿರ್ಮಾಣಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ಪ್ರಕೃತಿ ಕುರಿತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ಈ ಟ್ರಿ ಪಾರ್ಕ್ ನೀಡುತ್ತಿದೆ”.-ಸಿದ್ದಲಿಂಗ ಬಾಳಿ ಶಿಕ್ಷಕರು.
