ಮರಗೋಳದಲ್ಲಿ ಬೀರಲಿಂಗೇಶ್ವರ, ಮಾಳಿಂಗೇಶ್ವರರ ನೂತನ ಮಂದಿರ ಲೋಕಾರ್ಪಣೆ | ಹಾಲುಮತದವರ ಮನಸ್ಸು ಶುದ್ದ ಹಾಲಿನಂತ್ತಿದೆ: ಹಯ್ಯಾಳಸಿದ್ದೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದಾಸ ಶ್ರೇಷ್ಠ ಕನಕದಾಸರು, ಬೀರಲಿಂಗಶ್ವರರು ಹಾಗೂ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಮಾಳಿಂಗರಾಯ ಸೇರಿದಂತೆ ಅನೇಕರು ಹಾಲುಮತದ ರತ್ನಗಳಿದ್ದಂತೆ ಅವರಂತೆ ಹಾಲುಮತದವರು ಶುದ್ದ ಹಾಲಿನಂತೆ ಮನಸ್ಸಿನಿಂದ ಪವಿತ್ರವಾಗಿದ್ದಾರೆ ಎಂದು ಹಯ್ಯಾಳಸಿದ್ದೇಶ್ವರ ದೇವಸ್ಥಾನ ಹೂಡಾ(ಬಿ)ದ ಶ್ರೀ ಮರೆಪ್ಪ ಮುತ್ಯಾ ಹೇಳಿದರು.
ತಾಲೂಕಿನ ಮರಗೋಳ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಮಾಳಿಂಗೇಶ್ವರರ ನೂತನ ಮಂದಿರ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮರಗೋಳ ಗ್ರಾಮದವರು ಸರ್ವಜನಾಂಗದವರು ಕೂಡಿಕೊಂಡು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಇಂತಹ ಗ್ರಾಮದಲ್ಲಿ ಬೀರಲಿಂಗೇಶ್ವರ ಮತ್ತು ಮಾಳಿಂಗರಾಯ ದೇವಸ್ಥಾನವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಅಲ್ಲದೇ ಇಲ್ಲಿನ ಜನರ ಸೌರ್ಹಾದತೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಸಾತನೂರ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ, ದಾಸ ಸಾಹಿತ್ಯಕ್ಕೆ ಮಹತ್ವ ಬಂದಿದ್ದೇ ಸ್ವಂತ ಕನಕದಾಸರಿಂದ ಹೀಗಾಗಿ ಹಾಲುಮತ ಸಮಾಜ ಶ್ರೇಷ್ಠ ಸಮಾಜವಾಗಿದೆ. ಈ ಸಮಾಜವು ಸಧೃಡವಾಗಬೇಕಾದರೆ ನಾವುಗಳು ಎಲ್ಲರೂ ನಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿದಾಗ ಮಾತ್ರ ನಮ್ಮ ಸಮಾಜ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಡರಾಗಲು ಸಾಧ್ಯವಾಗುತ್ತದೆ ಎಂದರು.
ದೇವಸ್ಥಾನದ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕೊಂಡಂಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ದಿಗ್ಗಾಂವದ ಕಂಚಗಾರ ಹಳ್ಳಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು, ಶ್ರೀ ಶರಣಯ್ಯ ಸ್ವಾಮಿ, ಬೀರಣ್ಣ ಸ್ವಾಮಿ ಕೋರವಾರ, ಹಿರಗಪ್ಪ ತಾತಾ ಸೂಗೂರ, ಮುಖಂಡರಾದ ನಾಗಣ್ಣಗೌಡ, ಬಸವರಾಜ ವಾರದ, ಶರಣಗೌಡ ಪೊಲೀಸ್ ಪಾಟೀಲ್, ಅಣ್ಣಾರಾವ ಸಣ್ಣೂರಕರ್, ಶರಣು ಸಾಹು, ಬಸವರಾಜ ಪೂಜಾರಿ ಮೊಗಲಾ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಈರಪ್ಪ ಭೋವಿ, ಯಲ್ಲಾಲಿಂಗ ಪೂಜಾರಿ, ಬೀರಪ್ಪ ಹೆಬ್ಬಾಳ, ಬೀರಪ್ಪ ಮುಗಟಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಉತ್ತಮ ಶಿಕ್ಷಣವನ್ನು ಪಡೆದ ಹಾಗೂ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಕಾಶಿರಾಯ ಕಲಾಲ್ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.