ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಅಣಕು ಚುನಾವಣೆ, ಶೇ.92 ಪ್ರತಿಶತ ಮತದಾನ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಪ್ರಜಾಪ್ರಭುತ್ವದ ನಿಜವಾದ ಆಶಯಗಳು ಈಡೇರುವುದು ಉತ್ತಮ ನಾಯಕತ್ವದಿಂದ ಉತ್ತಮ ನಾಯಕರ ಆಯ್ಕೆ ಪಾರದರ್ಶಕ ಚುನಾವಣೆಯನ್ನು ಅವಲಂಬಿಸಿದೆ ಎಂದು ತಾಲೂಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಕೆ. ರಮೇಶಭಟ್ ಹೇಳಿದರು.
ತಾಲೂಕಿನ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಚುನಾವಣೆ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ಶಾಲಾ ತರಗತಿ ನಾಯಕತ್ವಕ್ಕಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ವಿಜೇತ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಆಮಿಷದ ಮತದಾನ ಪ್ರಜಾಪ್ರಭುತ್ವದ ಆಶಯಗಳನ್ನು ಹಾಳುಮಾಡುತ್ತವೆ. ಆದ್ದರಿಂದ ಯಾವುದೇ ಚುನಾವಣೆ ಬಂದರೂ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಿ ಉತ್ತಮ ನಾಯಕರನ್ನು ಆಯ್ಕೆ ಮಾಡಿ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಮಾಡುವಲ್ಲಿ ನಮ್ಮ ನಿಮ್ಮೆಲ್ಲರ ಪಾತ್ರ ಬಹಳ ಮುಖ್ಯವೆಂದರು.
ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಮಾತನಾಡಿ, ಚುನಾವಣೆಯ ಪ್ರತಿಯೊಂದು ಹಂತಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡುವುದರ ಮೂಲಕ ಈ ಹಂತದಲ್ಲೇ ಚುನಾವಣೆಗಳ ಅರಿವನ್ನು ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು. ಈ ಹಂತದಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ರಾಷ್ಟ್ರ ನಿರ್ಮಾಣ ಉತ್ತಮ ನಾಯಕತ್ವವನ್ನು ಅವಲಂಬಿಸಿದೆ ಎಂದು ಹೇಳಿದರು.
ಅತ್ಯಂತ ಉತ್ಸಾಹದಿಂದ ಮಕ್ಕಳು ಸರತಿ ಸಾಲಿನಲ್ಲಿ ನಿಂತು ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಿದರು. ಏನ್ ಸಿಸಿ ಕೆಡೆಟ್ ಗಳು ಪ್ರತಿ ಬೂತ್ ನಲ್ಲಿ ಶಿಸ್ತು ಮತ್ತು ರಕ್ಷಣಾ ವ್ಯವಸ್ಥೆಯನ್ನು ಮಾಡಿದರು. ನಾಮಪತ್ರ ಸಲ್ಲಿಕೆ ಯಿಂದ ಹಿಡಿದು ಚುನಾವಣಾ ಪ್ರಚಾರ ಹಾಗೂ ಮತದಾನ, ಮತ ಎಣಿಕೆ, ಫಲಿತಾಂಶ ಘೋಷಣೆ, ಪ್ರಮಾಣ ವಚನ ಸ್ವೀಕಾರ, ಪ್ರಮಾಣ ಪತ್ರ ವಿತರಣೆ ಹೀಗೆ ಎಲ್ಲವನ್ನೂ ಚುನಾವಣೆ ಸಾಕ್ಷರತಾ ಕ್ಲಬ್ ನ ಸಂಯೋಜಕ ಸಿದ್ದಲಿಂಗ ಬಾಳಿ ತುಂಬಾ ಅಚ್ಚುಕಟ್ಟಾಗಿ ನಿರ್ಹಹಿಸಿ ಸೈ ಎನಿಸಿಕೊಂಡರು.
ಒಟ್ಟು 410 ಮತದಾರರಲ್ಲಿ 378 ಮತದಾರರು ಮತ ಚಲಾವಣೆ ಮಾಡಿದರು 92 ಪ್ರತಿಶತ ಮತದಾನವಾಯಿತು. ಆಯ್ಕೆಯಾದ ವಿದ್ಯಾರ್ಥಿ ನಾಯಕರು : ಭಾಗ್ಯಶ್ರೀ, ಅನ್ನಪೂರ್ಣ, ಸಹಾನಾ, ಶ್ರೀಮಂತ, ಬಸವರಾಜ (10ನೇ) ಪೃಥ್ವಿರಾಜ, ಸಾಕ್ಷೀ, ರೋಷನ್, ಲಕ್ಷ್ಮಿ (9ನೇ) ಯಲ್ಲಪ್ಪ, ಭೂಮಿಕಾ, ಅಖಿಲೇಶ್, ಭಾಗ್ಯಶ್ರೀ (8ನೇ). ಶಾಲೆಯ ಮುಖ್ಯಗುರು ವಿದ್ಯಾಧರ ಖoಡಾಳ ಸೇರಿದಂತೆ ಸಿಬ್ಬಂದಿ ಬಳಗ ಉಪಸ್ಥಿತರಿದ್ದರು.
“ಮಕ್ಕಳಲ್ಲಿ ಚುನಾವಣೆ ಅರಿವು ಮೂಡಿಸಲು ನಡೆಸಿದ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಅತ್ಯಂತ ಯಶಸ್ವಿಯಾಗಿ ನಡೆದವು. ಆಡಳಿತ ಮಂಡಳಿಯ ಸಹಕಾರ ಶಿಕ್ಷಕರ ಸಹಭಾಗಿತ್ವದಿಂದ ಯಶಸ್ವಿಯಾಯಿತು. ಮಕ್ಕಳು ಇಡಿ ಚುನಾವಣೆ ಪ್ರಕ್ರಿಯೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು”.-ಸಿದ್ದಲಿಂಗ ಬಾಳಿ (ELC ಸಂಯೋಜಕರು).

