ಶಹಾಬಾದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ | ಕ್ರೀಡೆಗಳು ದೈಹಿಕ ಆರೋಗ್ಯಕ್ಕೆ ಪೂರಕ: ಕರಣಿಕ್
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಕ್ರೀಡೆಗಳು ದೈಹಿಕ ಆರೋಗ್ಯಕ್ಕೆ ಪೂರಕವಾಗಿದೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ್ ಹೇಳಿದರು.
ನಗರದ ಬಿವಿಎಮ ಶಾಲೆಯ ಕ್ರೀಡಾ ಮೈದಾನದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕ್ರೀಡೆಗಳು ಕೇವಲ ಸ್ಪರ್ಧೆಗಾಗಿ ಮಾತ್ರವಲ್ಲ. ದೈಹಿಕ ಆರೋಗ್ಯಕ್ಕೂ ಅತ್ಯಗತ್ಯ ಎಂದರು.
ರಾಜ್ಯ ಮತ್ತು ರಾಷ್ಟ್ರದಲ್ಲಿಯೂ ಸಹ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದ್ದು, ಕ್ರೀಡಾಪಟುಗಳು ಕ್ರೀಡಾಕೂಟಗಳ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ, ಇಲ್ಲಿ ವಿಜೇತರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ದೇಶದ ಘನತೆ, ಗೌರವ ತರಬೇಕು ಎಂದು ತಿಳಿಸಿದರು.
ನಗರ ಸಭೆ ಮಾಜಿ ಸದಸ್ಯ ರಾಜು ಮೇಸ್ತ್ರಿ ಮೇಜರ್ ಧ್ಯಾನ ಚಂದ ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ವೇದಿಕೆ ಮೇಲೆ ಗ್ರೇಡ್ 1 ದೈಹಿಕ ಶಿಕ್ಷಕ ಸಂಘದ ಹಣಮಂತ ಬಿರಾದರ, ಬಿವಿಎಮ ಶಾಲೆಯ ಮುಖ್ಯ ಗುರು ಗಂಗಾಧರ, ಕ್ರೀಡಾ ಸಂಯೋಜಕ ಮರಿಯಪ್ಪ ಬೊಮ್ಮನಳ್ಳಿಕರ್, ಬನ್ನಪ್ಪ ಎನ್, ಗಣೇಶ ಜಾಯಿ, ರತನರಾಜ ಕೋಬಾಳ ಇದ್ದರು.
ತಾಲ್ಲೂಕ ದಸರಾ ಕ್ರೀಡಾಕೂಟದಲ್ಲಿ ವಾಲಿಬಾಲ್ ನಲ್ಲಿ ಫ್ರೇಂಡ್ಸ್ ಡಿ. ಟೀಮ್ ಪ್ರಥಮ ಸ್ಥಾನ, ಕಬಡ್ಡಿಯಲ್ಲಿ ಹೊನ್ನಗುಂಟಾ ಪ್ರಥಮ ಸ್ಥಾನ, ಕೂಡಲ ಸಂಗಮ ಶಾಲೆ ದ್ವಿತೀಯ ಸ್ಥಾನ, ಖೋ ಖೋ ಆಟದಲ್ಲಿ ಹಿರೋಡೇಶ್ವರ ಮಾಲಗತ್ತಿ ಪ್ರಥಮ ಸ್ಥಾನ, ಬಿವಿಎಮ ದ್ವಿತೀಯ ಸ್ಥಾನ ಪಡೆದು ಕೇಕೆ ಹಾಕಿದರು.
ದಸರಾ ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಗ್ರಾಮದ ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಗೂ ಯುವಕ, ಯುವತಿಯರು ಭಾಗವಹಿಸಿದ್ದರು.
