ಸುಂಠಾಣ ತಾಂಡಾದ ಜನರಿಂದ ಆತ್ಮೀಯ ಬೀಳ್ಕೊಡುಗೆ |ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಶಿಕ್ಷಕ ಹಣಮಂತ ಸೇವೆ ಅನನ್ಯ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ಸುಂಠಾಣ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪ್ರಭಾರಿ ಮುಖ್ಯ ಶಿಕ್ಷಕ ಹಣಮಂತ ಖೋಡಳ್ಳಿ ಅವರನ್ನು ತಾಂಡಾದ ಜನರು ಹಾಗೂ ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಟ್ಟರು.
ಸುಂಠಾಣ ಬಡಾ ತಾಂಡದ ಸರ್ಕಾರಿ ಶಾಲಾ ವರಣದಲ್ಲಿ ಶನಿವಾರ ನಡೆದ ಬಿಳ್ಕೋಡುಗೆ ಸನ್ಮಾನ ಸಮಾರಂಭದಲ್ಲಿ ತಾಂಡಾದ ಜನರೆಲ್ಲ ಒಗ್ಗಟ್ಟಿನಿಂದ 14 ವರ್ಷಗಳಿಂದ ಸೇವೆ ಸಲ್ಲಿಸಿ, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಿದ ಶಿಕ್ಷಕನಿಗೆ ಹಬ್ಬದ ಮಾದರಿಯಲ್ಲಿ ಸನ್ಮಾನಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಮಾತನಾಡಿ, ನಮ್ಮ ತಾಂಡಾದ ಬಂದ ಈ ಶಿಕ್ಷಕರು ಕೇವಲ ಪಾಠ ಮಾಡುವುದು ನಮ್ಮ ಜವಾಬ್ದಾರಿ ಎಂಬ ಮನೋಭಾವನೆಯನ್ನು ತೊರೆದು ತಾಂಡಾದ ಪ್ರತಿಯೊಬ್ಬರ ಸಹಕಾರ ಪಡೆದು ಶಾಲೆಯ ಅಭಿವೃದ್ಧಿಗೆ ಸಲ್ಲಿಸಿದ ಇವರ ಸೇವೆ ಅನನ್ಯ ಎಂದು ಹೇಳಿದರು.
ಇವರಿಂದ ಕಲಿತ ನಮ್ಮ ಮಕ್ಕಳು ಉತ್ತಮ ವ್ಯಾಸಾಂಗ ಮಾಡುತ್ತಿದ್ದಾರೆ. ಎಲ್ಲ ಮಕ್ಕಳಲ್ಲಿ ಶಿಸ್ತು ರೂಢಿಸಿ, ಸುಂಠಾಣ ಬಡಾ ತಾಂಡಾ ಶಾಲೆಗೆ ಕೀರ್ತಿ ತಂದ ಶಿಕ್ಷಕರನ್ನು ಬೇರೆಡೆ ಕಳುಹಿಸಲು ನೋವಾಗುತ್ತಿದೆ. ಆದರೆ ಸರ್ಕಾರಿ ಆದೇಶ ಆಗಿರುವುದರಿಂದ ಇತರೆ ಶಾಲೆಯ ಮಕ್ಕಳಿಗೂ ಅವರ ಸೇವೆ ಲಭಿಸಲಿ ಎಂದರು.
ವರ್ಗಾವಣೆಗೊಂಡು ಸನ್ಮಾನ ಸ್ವೀಕರಿಸಿದ ಹಣಮಂತ ಖೋಡಳ್ಳಿ ಮಾತನಾಡಿ, ಶಿಕ್ಷಣ ಇಲಾಖೆ ನೀಡುವ ಪ್ರಶಸ್ತಿಗಳಿಗಿಂತ ತಾಂಡಾದ ಜನರು ಮತ್ತು ಹಳೆ ವಿದ್ಯಾರ್ಥಿಗಳು ತಮ್ಮ ಸೇವೆ ಸ್ಮರಿಸಿಕೊಂಡು ಸನ್ಮಾನ ಮಾಡುತ್ತಿರುವುದು ಹೆಚ್ಚು ಖುಷಿ ತಂದಿದೆ. ತಾಂಡಾದ ಜನರು ನಮ್ಮ ಶಾಲೆಯ ಎಲ್ಲ ಚಟುವಟಿಕೆಗಳಿಗೆ ಸಹಕಾರ ನೀಡಿದ್ದೀರಿ. ಅದೇ ರೀತಿ ಮುಂದೆ ಬರುವ ಶಿಕ್ಷಕರಿಗೂ ಉತ್ತಮ ಸಹಕಾರ ನೀಡಿ, ನಿಮ್ಮ ತಾಂಡಾವನ್ನು ಶೈಕ್ಷಣಿಕವಾಗಿ ಮುಂದುವರಿಸಿ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನೀಲಕುಮಾರ ಗುತ್ತೇದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಕಲಮೂಡ, ಪ್ರಧಾನ ಕಾರ್ಯದರ್ಶಿ ಬಸಂತರಾಯ ಪೆದ್ದಿ, ರಾಜ್ಯ ಸರ್ಕಾರಿ ನೌಕರರ ಸಂಘದ ಕೋಶಾಧ್ಯಕ್ಷ ಜಗನ್ನಾಥ ಬಂಡಿ, ಮುಖ್ಯಗುರು ಅಶೋಕ ಹೊಸಮನಿ, ಹಣಮಂತ ಮಂತೆಟ್ಟಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪಿತಾಂಬರ ಮಡಿವಾಳ, ರಾಮಕೃಷ್ಣ ಮುಚ್ಚಟ್ಟಿ, ಎಸ್ಡಿಎಂಸಿ ಅಧ್ಯಕ್ಷ ರಾಮದಾಸ ರಾಠೋಡ, ಮುಖ್ಯಗುರು ಹಣಮಂತ ಸಿನ್ನೂರ, ಲಕ್ಷ್ಮೀ ಸಂತೋಷ ಚಿನ್ನ ರಾಠೋಡ, ಮಲ್ಲಪ್ಪ ಚಿಂತಕೊಟಿ, ಪ್ರೇಮ ಯಲಮಡಗಿ, ಸಂಜುಕುಮಾರ ಕೋಡ್ಲಿ, ರಮೇಶ ನಲಾವಡೆ, ಗಂಗಾಧರ ಯೋಗಿ, ಶಾಂತಕುಮಾರ ಎಕಮಾಯಿ, ಧರ್ಮಣ್ಣ ನಾವದಗಿ, ಸಂಜುಕುಮಾರ ರಾಠೋಡ, ಪಾಂಡು ನಾಯಕ, ತಾರಚಂದ ಕಾರಬಾರಿ, ಗೋಪಾಲ ದೇವ, ಸಂಜುಕುಮಾರ ಸೇರಿದಂತೆ ಅನೇಕರು ಇದ್ದರು. ಶಿಕ್ಷಕ ನಾಗರಾಜ ಮಡಿವಾಳ ಗೋಟೂರ ನಿರೂಪಿಸಿ ವಂದಿಸಿದರು.

