ಪ್ರಧಾನಿ ಮೋದಿ ದೇಶದ ಸುದೀರ್ಘ ಅವಧಿಯ ಪ್ರಧಾನಿಯಾಗಿ ಸೇವೆ | ಚಿತ್ತಾಪುರದಲ್ಲಿ ಬಿಜೆಪಿ ಮುಖಂಡರಿಂದ ವಿಶೇಷ ಪೂಜೆ, ಸಂಭ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸುದೀರ್ಘ ಅವಧಿಯ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಐತಿಹಾಸಿಕ ಸಾಧನೆಯ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಮುಖಂಡರು ಬುಧವಾರ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ಸಂಭ್ರಮಿಸಿದರು.
ಪ್ರಧಾನಿ ಮೋದಿಯವರ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ದೇಶ ಮುನ್ನಡೆಸುವ ಅವರ ಸಂಕಲ್ಪಕ್ಕೆ ಮತ್ತಷ್ಟು ಶಕ್ತಿ ಸಿಗಲಿ ಎಂದು ದೇವಸ್ಥಾನದಲ್ಲಿ ವಿಶೇಷ ಅರ್ಚನೆ ಮಾಡಿ, ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೂಡ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೂಗಾರ ಹಾಗೂ ಮಲ್ಲಿಕಾರ್ಜುನ್ ಇಟಗಿ ಅವರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಚಿತ್ತಾಪುರ ನಗರ ಘಟಕದ ಅಧ್ಯಕ್ಷ ಆನಂದ ಪಾಟೀಲ ನರಬೋಳಿ, ಸಂಗಮೇಶ್ ಪಾಟೀಲ, ರಾಜು ನಾಯಕ್, ರಾಜಪ್ಪ ಬೊಮ್ಮನಳ್ಳಿ, ಸಂತೋಷ್ ಪೂಜಾರಿ, ರಮೇಶ್ ಬೊಮ್ಮನಳ್ಳಿ, ರಾಜು ರಾಠೋಡ, ರಮೇಶ್ ಕಾಳನೂರ, ಬಸವರಾಜ ಸಂಕನೂರ, ಶಿವಕುಮಾರ್ ಸಂಕನೂರ, ವಿಕ್ರಮ್ ರೆಡ್ಡಿ, ಮದನ್ ಸಾಲಿಮಠ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಪ್ರಧಾನಿ ಮೋದಿಯವರ ಸಾಧನೆಯನ್ನು ಶ್ಲಾಘಿಸಿದರು.

