Oplus_0

ಡಿ.28, 29 ರಂದು ಬಾಗಲೂರಿನಲ್ಲಿ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ, ಜೀವಮಾನ ಸಾಧನಾ ಪ್ರಶಸ್ತಿಗೆ ಬಿ.ಆರ್.ಪಾಟೀಲ, ಹೆಚ್.ಎನ್. ಪ್ರಶಸ್ತಿಗೆ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, ಚೈತನ್ಯಶ್ರೀ ಪ್ರಶಸ್ತಿಗೆ ಜಯಶ್ರೀ ಚಟ್ನಳ್ಳಿ ಆಯ್ಕೆ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಇದೇ ಡಿ.28 ಮತ್ತು 29 ರಂದು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಬಾಗಲೂರು ವಿ.ಜೆ. ಇಂಟರ್ ನ್ಯಾಶನಲ್ ಶಾಲಾ ಮೈದಾನದಲ್ಲಿ ೪ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ನಡೆಯಲಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಶೀವರಂಜನ್ ಸತ್ಯಂಪೇಟೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಾಜಿ ಸಚಿವೆ, ರಂಗಕರ್ಮಿ, ಚಲನಚಿತ್ರ ನಟಿ ಉಮಾಶ್ರೀ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವನ್ನು ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. 28 ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ಸತೀಶ ಜಾರಕಿಹೊಳಿ, ಎನ್.ಎಸ್. ಬೋಸರಾಜ್, ಎಚ್.ಸಿ. ಮಹಾದೇವಪ್ಪ, ಕೆ.ಎಚ್. ಮುನಿಯಪ್ಪ, ಶಾಸಕರಾದ ಎಸ್.ಆರ್. ವಿಶ್ವನಾಥ, ಮಂಜುಳಾ ಅರವಿಂದ ಲಿಂಬಾವಳಿ, ಮುನಿರತ್ನ, ರಾಮಮೂರ್ತಿ, ಎಸ್.ಟಿ. ಸೋಮಶೇಖರ ಮತ್ತಿತರರು ಭಾಗವಹಿಸಲಿದ್ದಾರೆ. ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ನಮ್ಮ ಸಂವಿಧಾನ ನಮ್ಮ ಹಕ್ಕು, ಪ್ರಸ್ತುತ ರೈತರ ಭವಣೆಗಳು, ಪ್ರಸ್ತುತ ಶೈಕ್ಷಣಿಕ ತಲ್ಲಣಗಳು, ಅಂಗೈಯಲ್ಲಿ ಆರೋಗ್ಯ, ಸ್ತ್ರೀ ಮನದ ತಲ್ಲಣಗಳು, ಸೈಬರ್ ಸುರಕ್ಷತೆ ವಿಷಯ ಕುರಿತು ಮೂರು ಗೋಷ್ಠಿಗಳು ಜರುಗಲಿದ್ದು, ಜಸ್ಟಿಸ್ ನಾಗಮೋಹನದಾಸ್, ಡಾ. ಪುರುಷೋತ್ತಮ ಬಿಳಿಮಲೆ, ಎಚ್.ಕೆ. ವಿವೇಕಾನಂದ, ಡಾ. ಆಂಜನಪ್ಪ, ಡಾ. ಪ್ರೇಮಾ ಸಿದ್ಧರಾಜು, ಡಾ. ಉದಯಶಂಕರ ಪುರಾಣಿಕ ಅವರು ವಿಷಯ ಮಂಡಿಸಲಿದ್ದಾರೆ ಎಂದು ಹೇಳಿದರು.

29 ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಬೆಂಗಳೂರು ಕೃಷಿ ವಿವಿ ವಿಶ್ರಾಂತ ನಿರ್ದೇಶಕ ಕೆ. ನಾರಾಯಣಗೌಡ ಸಮಾರೋಪ ನುಡಿಗಳನ್ನಾಡಲಿದ್ದಾರೆ. ನಂತರ ನಡೆಯಲಿರುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್. ನಾಗಾಭರಣ ವಹಿಸಲಿದ್ದು, ಹುಲಿಕಲ್ ನಟರಾಜ್ ಅವರಿಂದ ಪವಾಡ ಬಯಲು ಕಾರ್ಯಕ್ರಮ ಹಾಗೂ ಕೆಂಪೇಗೌಡ ನಾಟಕ ಪ್ರದರ್ಶನವಾಗಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಣಮಂತರಾಯ ಐನೂಲಿ, ಡಾ. ಅಶೋಕ ದೊಡ್ಡಮನಿ, ಸಂಗಣ್ಣ ಜಿ. ಸತ್ಯಂಪೇಟೆ, ಸತೀಶ ಸಜ್ಜನಶೆಟ್ಟಿ ಇತರರು ಇದ್ದರು.

ಪ್ರಶಸ್ತಿ ಪುರಸ್ಕೃತರು: ಇದೇ ವೇಳೆಯಲ್ಲಿ ರಾಜ್ಯಮಟ್ಟದ ಜೀವಮಾನ ಸಾಧನಾ ಪ್ರಶಸ್ತಿ, ಹೆಚ್.ಎನ್. ಪ್ರಶಸ್ತಿ ಹಾಗೂ ಚೈತನ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಲಬುರಗಿ ಜಿಲ್ಲೆಯಿಂದ ಜೀವಮಾನ ಸಾಧನಾ ಪ್ರಶಸ್ತಿಗೆ ಮುಖ್ಯಮಂತ್ರಿ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ ಹೆಚ್.ಎನ್. ಪ್ರಶಸ್ತಿಗೆ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, ಚೈತನ್ಯಶ್ರೀ ಪ್ರಶಸ್ತಿಗೆ ಜಯಶ್ರೀ ಚಟ್ನಳ್ಳಿ ಆಯ್ಕೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

Spread the love

Leave a Reply

Your email address will not be published. Required fields are marked *

error: Content is protected !!