ಚಿತ್ತಾಪುರ ಕೊತಲಾಪೂರ ಯಲ್ಲಮ್ಮ ದೇವಸ್ಥಾನ ಕಳವು, ಬೆಚ್ಚಿ ಬಿದ್ದ ಜನತೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಾಹರಪೇಟ್ ಏರಿಯಾದ ಕೊತಲಾಪೂರ ಯಲ್ಲಮ್ಮ ದೇವಸ್ಥಾನದ ಕೀಲಿಕೈ ಮುರಿದು ಒಳಗಡೆಯ ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ಕಟ್ ಮಾಡಿ ತೆಗೆದುಕೊಂಡು ಹೋದ ಕಳ್ಳತನ ಪ್ರಕರಣ ಬುಧವಾರ ಬೆಳಕಿಗೆ ಬರುತ್ತಿದ್ದಂತೆ ಪಟ್ಟಣದ ಜನತೆ ಬೆಚ್ಚಿ ಬಿದ್ದಿದೆ.
ನವರಾತ್ರಿ ನಿಮಿತ್ತ ದೇವಸ್ಥಾನಕ್ಕೆ ಸುಣ್ಣ ಬಣ್ಣ ಮಾಡಿ ಅಲಂಕಾರ ಕಾರ್ಯ ನಡೆಯುತ್ತಿದೆ ಅದರಂತೆ ಮಂಗಳವಾರ ಕೊನೆ ಹಂತಕ್ಕೆ ತಲುಪಿತ್ತು. ಉಳಿದ ಕಾರ್ಯ ನಾಳೆ ಮಾಡಿದರಾಯಿತು ಎಂದು ದೇವಸ್ಥಾನದ ಗೇಟ್ ಮುಚ್ಚಿ ಕೀಲಿಕೈ ಹಾಕಿ ಹೋಗಲಾಗಿತ್ತು. ಎಂದಿನಂತೆ ಬುಧವಾರ ಬೆಳಗ್ಗೆ ದೇವಿಯ ಪೂಜೆ ಕಾರ್ಯಕ್ಕೆ ಅರ್ಚಕ ಮಂಜುನಾಥ ಜೀರ್ ಆಗಮಿಸಿದಾಗ ದೇವಸ್ಥಾನ ಗೇಟ್ ಗೆ ಹಾಕಿದ ಕೀಲಿಕೈ ಮುರಿದು ಒಳಗಡೆ ಇರುವ ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ಕಟ್ ಮಾಡಿ ಕಳ್ಳತನ ಆಗಿರುವುದು ಕಂಡುಬಂದಿದೆ ಅಲ್ಲದೇ ಬೆಳ್ಳಿಯ ಕಣ್ಣು ಬಟ್ಟು ಹಾಗೂ ಪಾದುಕೆ, ತಾಟ್ ಸಹ ಕಳ್ಳತನ ಆಗಿದೆ ಅಷ್ಟೇ ಅಲ್ಲದೇ ಮೂರ್ತಿಯನ್ನೇ ಕಳ್ಳತನ ಮಾಡುವ ಪ್ರಯತ್ನ ನಡೆದಿದೆ.
ಮನೆ, ಅಂಗಡಿಗಳನ್ನು ಕಳ್ಳತನ ಮಾಡುವ ಕಳ್ಳರು ದೇವರನ್ನು ಸಹ ಬಿಡುವುದಿಲ್ಲ ಎಂದರೆ ಇವರು ಎಂತಹ ಕಳ್ಳರು ದೇವರು ಎಂದರೆ ಭಯನೇ ಇಲ್ಲವಾ, ಆ ಕಳ್ಳರನ್ನು ದೇವಿಯೇ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಈ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಪಿಎಸ್ಐ ಶ್ರೀಶೈಲ್ ಅಂಬಾಟಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಮೇಶ್ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಮುಖಂಡ ಕುನಾಲ್ ತುರೆ ಸೇರಿದಂತೆ ಸಾರ್ವಜನಿಕರು ಇದ್ದರು.

