ಜಾತಿ ಜನಗಣತಿಯಲ್ಲಿ ಹಡಪದ ಎಂದು ನಮೂದಿಸಲು ರಮೇಶ್ ಹಡಪದ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ಸರ್ಕಾರವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅಡಿ ಜಾತಿ ಜನಗಣತಿ ಸೆ.22 ರಿಂದ ಅ.7 ರವರೆಗೆ ನಡೆಸಲು ಸೂಚಿಸಿದ್ದು, ಅದರಲ್ಲಿ ಪ್ರಮುಖವಾಗಿ ಕಾಲಂ ನಂಬರ್ 8 ರಲ್ಲಿ ಧರ್ಮ – ಹಿಂದೂ, ಕಾಲಂ ನಂಬರ್ 9 ರಲ್ಲಿ ಜಾತಿ – ಹಡಪದ, ಕಾಲಂ ನಂಬರ್ 10 ರಲ್ಲಿ ಉಪಜಾತಿ – ಹಡಪದ ಎಂದು ನಮೂದಿಸಬೇಕು ಎಂದು ಹಡಪದ ಸಮಾಜ ತಾಲೂಕು ಅಧ್ಯಕ್ಷ ರಮೇಶ ಎಸ್. ಹಡಪದ ಕೊಲ್ಲೂರು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷರ ನಿರ್ಧಾರದಂತೆ ಜಾತಿ ಕಾಲಂನಲ್ಲಿ ಹಡಪದ ಎಂದು ನಮೂದಿಸಬೇಕು ಎಂದು ಕೋರಿದ್ದಾರೆ.
ಸೆ. 22 ರಿಂದ ನಿಮ್ಮ ಮನೆಯ ಬಾಗಿಲಿಗೆ ಸಮೀಕ್ಷೆದಾರರು ಬಂದಾಗ 60 ಪ್ರಶ್ನಾವಳಿಯ ಡಿಜಿಟಲ್ ಸಮೀಕ್ಷೆ ಇದ್ದು, ಅದರಲ್ಲಿ 8, 9 ಮತ್ತು 10 ಕಾಲಂನಲ್ಲಿ ಈ ಮೇಲಿನಂತೆ ಉತ್ತರಿಸಿ. ಮನೆಯ ಪ್ರತಿ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಹೊಂದಿದ ಫೋನ್ ನಂಬರ್ ಅನ್ನು ಚಾಲ್ತಿಯಲ್ಲಿರಬೇಕು. ಸಮೀಕ್ಷೆ ಸಮಯದಲ್ಲಿ ಆಧಾರ್ ಲಿಂಕ್ ಫೋನ್ ಸಂಖ್ಯೆಗೆ ಓಟಿಪಿ ಬರುತ್ತದೆ. ಐದು ವರ್ಷದ ಕೆಳಗಿನ ಮಕ್ಕಳಿಗೆ ಬಾಲ ಆಧಾರ್ ಕಾರ್ಡ್ ಮಾಡಿಸಿ ಅದನ್ನು ಪಾಲಕರ ಫೋನ್ ಸಂಖ್ಯೆಗೆ ಲಿಂಕ್ ಮಾಡಲು ಕೋರಲಾಗಿದೆ.
ಈ ರೀತಿಯಾಗಿ ಸರಿಯಾದ ಮಾಹಿತಿ ನೀಡಿ ರಿಜಿಸ್ಟರ್ ನಲ್ಲಿ ಪೆನ್ನಿನಿಂದ ಬರೆದ ಬಗ್ಗೆ ಖಾತ್ರಿಪಡಿಸಿಕೊಳ್ಳಿ. ಸರಿಯಾದ ಮಾಹಿತಿ ನೀಡಿ ಮುಂದೆ ನಿಮ್ಮ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

