ಚಿತ್ತಾಪುರ ತಹಸೀಲ್ದಾರರ ಕರ್ತವ್ಯ ಚ್ಯುತಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಹಸೀಲ್ದಾರ್ ಕರ್ತವ್ಯ ಚ್ಯುತಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ ಎಂದು ನಾಗಾವಿ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ನಾಗಾವಿ ಹಿತರಕ್ಷಣಾ ಸಮಿತಿ ಮತ್ತು ಚಿತ್ತಾಪುರದ ನಾಗರಿಕರಿಂದ ಕಳೆದ ಮಾರ್ಚ್ 12 ರಂದು ಐತಿಹಾಸಿಕ ನಾಗಾವಿ ವಿಶ್ವವಿದ್ಯಾಲಯ ಪರಿಸರಕ್ಕೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆ ಮರುಪರಿಶೀಲನೆ ಮಾಡುವುದು ಮತ್ತು ಸ್ಥಳದ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ಹೊಸ ಗೆಜೆಟ್ ಹೊರಡಿಸುವ ಬಗ್ಗೆ ಮಠಾಧೀಶರ ನೇತೃತ್ವದಲ್ಲಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಕೊಡಲಾಗಿತ್ತು.
ಆ ಪತ್ರದ ಆಗು ಹೋಗುಗಳ ಕುರಿತು ತಿಳಿದುಕೊಳ್ಳಲು, ಅಕ್ಟೋಬರ್ 13 ರಂದು ಮತ್ತೊಂದು ಪತ್ರ ಕೊಟ್ಟಿರುತ್ತೇವೆ. ಈಗ 40 ದಿನವಾದರೂ ಇನ್ನೂ ಉತ್ತರ ಸಿಕ್ಕಿಲ್ಲ, ನ್ಯಾಯಯುತವಾಗಿ ಹೋರಾಟದ ಮೂಲಕ ಮನವಿ ಸಲ್ಲಿಸಿರುತ್ತೇವೆ. ಇದರಲ್ಲಿ ಸಂತರು, ಹಿಂದೂ ಬಾಂಧವರು ಮತ್ತು ಯಲ್ಲಮ್ಮನ ನೂರಾರು ಭಕ್ತರು ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.
ಆದರೆ ಈ ರೀತಿಯ ನಮ್ಮ ಹೋರಾಟದ ಬಗ್ಗೆ ನಿಷ್ಕಾಳಜಿ ವಹಿಸಿ, ತಮ್ಮ ಕರ್ತವ್ಯಕ್ಕೆ ತಹಸೀಲ್ದಾರರು ಚ್ಯುತಿ ತಂದಿದ್ದು ನಮ್ಮನ್ನು ಅವಮಾನಿಸಿದಂತಾಗಿದ್ದು,ಇದರ ಬಗ್ಗೆ ತಾವು ಕ್ರಮ ಕೈಗೂಳ್ಳಬೇಕು. ನಾಗಾವಿ ಅಭಿವೃದ್ಧಿಯ ಸಂಪೂರ್ಣ ಡಿಪಿಆರ್ ಮತ್ತು ಪತ್ರದ ಆಗು ಹೋಗುಗಳ ಬಗ್ಗೆ ತಕ್ಷಣ ನಮ್ಮ ಸಮಿತಿಗೆ ಮತ್ತು ನಾಗರಿಕರ ಮುಂದಿಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

