ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ನಡೆದ 1008 ಬಡ ರೈತರ ಮಕ್ಕಳ ಉಚಿತ ಸಾಮೂಹಿಕ ವಿವಾಹ ಸಮಾರಂಭ ಯಶಸ್ವಿ: ಮಹೇಶ್ ಬನ್ನೆಟ್ಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಟಿ.ಚಂದೊರಶೇಖರ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಶೃಂಗೇರಿ ಶ್ರೀ ಮಠದ ಅಧ್ಯಕ್ಷತೆಯಲ್ಲಿ ಡಿ.7 ರಂದು ನಡೆದ ರೈತರ ವಿಜಯೋತ್ಸವ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯದ ಎಲ್ಲಾ ವರ್ಗದ 1008 ಉಚಿತ ಸಾಮೂಹಿಕ ವಿವಾಹ ಸಮಾರಂಭ ಅಭೂತಪೂರ್ವ ಯಶಸ್ವಿಯಾಗಿದೆ ಎಂದು ರಾಜ್ಯ ಕಾರ್ಯದರ್ಶಿ, ಚಿತ್ತಾಪುರ ತಾಲೂಕು ಅಧ್ಯಕ್ಷ ಮಹೇಶ್ ಬನ್ನೆಟ್ಟಿ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಬಿ.ಟಿ.ಚಂದ್ರಶೇಖರ ನೇತೃತ್ವದಲ್ಲಿ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಬಡ ರೈತರ ಮಕ್ಕಳನ್ನು ಗುರುತಿಸಿ ಸರ್ಕಾರದ ನಿಯಮಗಳನ್ವಯ ಅಂದುಕೊಂಡಂತೆ 1008 ಜೋಡಿಗಳ ಕಲ್ಯಾಣೋತ್ಸವ ಕಾರ್ಯಕ್ರಮ ಐತಿಹಾಸಿಕವಾಗಿ ನಡೆಯಿತು ಎಂದು ಹೇಳಿದರು.
ಎಷ್ಟೇ ಅಡೆತಡೆಗಳು ಹಾಗೂ ಟೀಕೆ ಟಿಪ್ಪಣಿ ಬಂದರೂ ಸಹ ಯಾವುದಕ್ಕೂ ಹಿಂಜರಿಯದೆ ಬರುವ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ನಮ್ಮ ರಾಜ್ಯಾಧ್ಯಕ್ಷರು ಸಮರ್ಥವಾಗಿ ನಿಭಾಯಿಸಿ ಕಲ್ಯಾಣೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದರು.
ವಧು-ವರರಿಗೆ ನೀಡುವಂತಹ ಉಡುಗೊರೆಗಳು, ತಾಳಿ, ಪಾತ್ರೆ, ಬಾಂಡೆ, ವಸ್ತ್ರಗಳು ಹಾಗೂ ಇತರೆ ಸಾಮಗ್ರಿಗಳು ಸಂಘಟನೆ ವತಿಯಿಂದ ನೀಡಲಾಗಿದ್ದು, ಚಿಕ್ಕ ಸಂಸಾರ ನಡೆಸಲು ಸರ್ಕಾರದಿಂದ ರೂ. 5ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲು ಮನವಿಯನ್ನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಲಬುರಗಿ ಜಿಲ್ಲೆಯಿಂದ ಒಟ್ಟು 51 ಹಾಗೂ ಚಿತ್ತಾಪುರ ತಾಲೂಕಿನಿಂದ 21 ಜೋಡಿಗಳನ್ನು ಗುರುತಿಸಿ ಸಂಪ್ರದಾಯದ ಪ್ರಕಾರ ವಿವಾಹ ಮಾಡಿಸಲಾಗಿದೆ ಎಂದು ತಿಳಿಸಿದರು.

