ಮಣಿಕಂಠ ರಾಠೋಡ ಹೇಳಿಕೆ ಹಾಸ್ಯಾಸ್ಪದ: ದೇವಿಂದ್ರ ಯಾಬಾಳ ತಿರುಗೇಟು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸ ಇಲ್ಲದ ಮಣಿಕಂಠ ರಾಠೋಡ, ಪ್ರಿಯಾಂಕ್ ಖರ್ಗೆ ಸೋಲಿಸುವ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಕಾಂಗ್ರೆಸ್ ಯುವ ಅಧ್ಯಕ್ಷ ದೇವಿಂದ್ರ ಯಾಬಾಳ ದಿಗ್ಗಾಂವ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಂದಿನ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಸೋಲಿಸುವುದೇ ನನ್ನ ಏಕೈಕ ಅಜೆಂಡಾ ಎಂದು ಹೇಳಿದ ಮಣಿಕಂಠ ರಾಠೋಡ, ಮೊದಲು ನಿನ್ನ ಟಿಕೆಟ್ ಬಗ್ಗೆ ಯೋಚಿಸು, ನಿನೋಬ್ಬ ನಿಮ್ಮ ಪಕ್ಷದ ನಾಯಕರಿಂದ ಹಾಗೂ ಜನರಿಂದ ತಿರಸ್ಕಾರಕ್ಕೆ ಒಳಗಾದವನು ನೀನು, ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ.
ಚಿತ್ತಾಪುರದ ಮಹಾಜನತೆ ನನ್ನನ್ನು ಮನೆ ಮಗನಂತೆ ಪ್ರೀತಿಸುತ್ತಾರೆ ಎಂದಾಗ ಮತ್ತೇ ಚುನಾವಣೆಯಲ್ಲಿ ಸೋತಿದ್ದು ಏಕೆ, ಚಿತ್ತಾಪುರ ಜನರು ವಿದ್ಯಾವಂತರು ಪ್ರಬುದ್ಧರು ಹೀಗಾಗಿ ತಕ್ಕ ಪಾಠ ಕಲಿಸಿದ್ದಾರೆ. ಚುನಾವಣೆಯಲ್ಲಿ ಸೋತು ನಂತರ ಮೂರು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಮಣಿಕಂಠ ಈಗ ಜನ್ಮದಿನದ ನೆಪದಲ್ಲಿ ಚಿತ್ತಾಪುರ ಕ್ಕೆ ಆಗಮಿಸಿ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ತಾನೊಬ್ಬ ರೌಡಿ ಶೀಟರ್ ಆಗಿದ್ದು, ತನ್ನ ತಪ್ಪುಗಳನ್ನು ಇಟ್ಟುಕೊಂಡು ನನ್ನ ಸೋಲಿಗೆ ಪ್ರಿಯಾಂಕ್ ಖರ್ಗೆ ಷಡ್ಯಂತ್ರ ಕಾರಣ ಎಂದು ಹೇಳುವ ಮಣಿಕಂಠ ರಾಠೋಡ ತಲೆ ಕೆಟ್ಟಿದೆ ಹೀಗಾಗಿ ಬಾಯಿ ಚಪಲಕ್ಕೆ ಮಾತನಾಡುತ್ತಾನೆ. ಹೀಗಾಗಿ ಇಂತಹ ತಲೆಬುಡವಿಲ್ಲದ ಮಾತುಗಳಿಗೆ ಯಾರೂ ಗಮನ ನೀಡಬೇಡಿ ಎಂದು ತಿಳಿಸಿದ್ದಾರೆ.
ಈಚೆಗೆ ಚಿತ್ತಾಪುರದಲ್ಲಿ ನಡೆದ ಸಾವಿರ ಕೋಟಿ ಅಡಿಗಲ್ಲು ಸಮಾರಂಭಕ್ಕೆ ಹಣ ಕೊಟ್ಟು ಜನರನ್ನು ಸೇರಿಸಿಲ್ಲ, ಜನರೇ ಸ್ವಯಂ ಪ್ರೇರಿತರಾಗಿ ಅಭಿಮಾನದಿಂದ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಾವಿರ ಕೋಟಿ ಅನುದಾನ ತಂದು ಅದ್ದೂರಿಯಾಗಿ ಅಡಿಗಲ್ಲು ಸಮಾರಂಭ ಮಾಡಿರುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ಮಣಿಕಂಠ ರಾಠೋಡ ಗೆ ಛೂ ಬಿಟ್ಟಿದ್ದಾರೆ ಎಂದು ಕುಟುಕಿದ್ದಾರೆ.

