ಸನ್ನತಿಯಲ್ಲಿ ನಾಲ್ಕನೇ ವರ್ಷದ ಬೇಸಿಗೆ ಸಂಸ್ಕಾರ ಶಿಬಿರಕ್ಕೆ ಚಾಲನೆ | ಶ್ರೀ ಗುರು ಸೋಮೇಶ್ವರ ವೈದಿಕ ಜ್ಯೋತಿ ಸಂಸ್ಥೆಯ ಕಾರ್ಯ ಶ್ಲಾಘನೀಯ: ದಿಗ್ಗಾಂವ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಈ ಭಾಗದ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿರುವ ಶ್ರೀ ಗುರು ಸೋಮೇಶ್ವರ ವೈದಿಕ ಜ್ಯೋತಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಸನ್ನತಿ ಗ್ರಾಮದಲ್ಲಿ ಶ್ರೀ ಗುರು ಸೋಮೇಶ್ವರ ವೈದಿಕ ಜ್ಯೋತಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ನಾಲ್ಕನೇ ವರ್ಷದ ಬೇಸಿಗೆ ಸಂಸ್ಕಾರ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ಕಾಲದ ಗುರುಕುಲದ ಪದ್ಧತಿ ಮರಳಿ ತಂದಿದ್ದಾರೆ , ಮಕ್ಕಳಲ್ಲಿ ಶ್ರದ್ಧೆ, ಭಕ್ತಿ, ಸಂಸ್ಕಾರ ಪ್ರತಿ ಹೆಜ್ಜೆಯಲ್ಲಿ ಮೂಡುವ ಹಾಗೆ ಮಕ್ಕಳನ್ನು ಬೆಳೆಸುತ್ತಿರುವುದನ್ನು ನೋಡಿದರೆ ಇಲ್ಲಿ ಕಲಿತ ಮಕ್ಕಳು ಮುಂದಿನ ದಿನಮಾನಗಳಲ್ಲಿ ಒಳ್ಳೆ ಸಮಾಜ ನಿರ್ಮಾಣ ಮಾಡುವುದಕ್ಕೆ ಮಕ್ಕಳು ಮುಂಚೂಣಿಯಲ್ಲಿ ಇರುತ್ತಾರೆ ಅನ್ನುವುದು ಕಂಡುಬರುತ್ತದೆ ಎಂದು ಹೇಳಿದರು.
ಚಟ್ನಳ್ಳಿ ಶ್ರೀ ವಿಶ್ವರಾಧ್ಯ ಸ್ವಾಮಿಗಳು ಮಾತನಾಡಿ, ಮನುಷ್ಯನಿಗೆ ಸಂಸ್ಕಾರವೇ ಭೂಷಣ, ಅಂತ ಸಂಸ್ಕಾರವನ್ನು ನೀಡತ್ತಿರುವ ಜಗದೀಶ್ ಶಾಸ್ತ್ರಿಗಳವರ ಕಾರ್ಯ ಬಹಳ ಉತ್ತಮ ಎಂದು ಹೇಳಿದರು. ಈ ದಿನಮಾನಗಳಲ್ಲಿ ನಮ್ಮ ಇಚ್ಛೆಯಂತೆ ಬದುಕುವುದಕ್ಕೆ ಜ್ಞಾನ ಸಂಸ್ಕಾರ ಬಹಳ ಮುಖ್ಯ, ಅದು ಸನ್ನತಿಯ ಸೋಮೇಶ್ವರ ದೇವಸ್ಥಾನದಲ್ಲಿ ಈ ಶಿಬಿರ ವಿದ್ಯಾರ್ಥಿಗಳಲ್ಲಿ ನೋಡಬಹುದು ಎಂದರು.
ಉದ್ಘಾಟನೆ ನೆರವೇರಿಸಿದ ತೊಗರಿ ಮಂಡಳಿ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ ನಾಲವಾರ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಮೂಲ ಅಡಿಪಾಯ ಮಕ್ಕಳಿಗೆ ಸಂಸ್ಕಾರ ನೀಡುವುದು. ಅಂತಹ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ಜಗದೀಶ್ ಶಾಸ್ತ್ರಿಗಳ ಸೇವೆ ಅನನ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಂಜುನಾಥ್ ಗೌಡ ಪೊಲೀಸ್ ಪಾಟೀಲ್, ಚಂದ್ರಶೇಖರ ಸಾಹುಕಾರ್ ಸನ್ನತಿ, ಶರಣಯ್ಯ ಸ್ವಾಮಿ ಬೆಂಗಳೂರು, ನಿವೃತ್ತ ಅಧಿಕಾರಿ ಅಶೋಕ್ ಕಲಾಲ್ ಸನ್ನತಿ, ಶಿವನಾಗಪ್ಪ ಮುತ್ತಲಗಡ್ಡಿ ದಿಗ್ಗಾಂವ ವೇದಿಕೆಯಲ್ಲಿದ್ದರು.
ಅಭಿಷೇಕ್ ಶಾಸ್ತ್ರಿ ಸೈದಾಪುರ್. ಜಗದೀಶ್ ಚೌಕಿಮಠ ಕಲಬುರಗಿ, ಗಡ್ಲಿಂಗಯ್ಯ ಸ್ವಾಮಿ, ಪಂಚಾಕ್ಷರಿ , ವೀರಯ್ಯಸ್ವಾಮಿ ಅಡ್ವಕೇಟ್, ಸೋಮಶೇಖರ್ ಮಕ್ಕಳ ತಂದೆ ತಾಯಿಗಳು ಇತರರು ಇದ್ದರು. ಸಂಗಯ್ಯ ಸ್ವಾಮಿ ವನಗುಂಟ ಸಂಗೀತ ಸೇವೆ ಹಾಗೂ ಮಂಜುನಾಥ್ ಗುಣಗಾವ್ ತಬಲಾ ಸೇವೆ ಸಲ್ಲಿಸಿದರು. ಜಗದೀಶ್ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶರಣು ಉಡಿಗಿ ನಿರೂಪಿಸಿದರು.

