ಕತ್ತಲೆಯಲ್ಲಿ ಸಾಗಿದ ಮೆರವಣಿಗೆ, ಸಾರ್ವಜನಿಕರ ಆಕ್ರೋಶ | ಭಕ್ತಸಮೂಹ ನಡುವೆ ವಿಜೃಂಭಣೆಯಿಂದ ಜರುಗಿದ ಚಿತ್ತಾಷಹಾವಲಿ ಸಂದಲ್ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಹಿಂದು-ಮುಸ್ಲಿಂ ಭಾವೈಕ್ಯತೆಯ ಸೂಫಿ ಸಂತ -ಹಜರತ್ ಚಿತ್ತಾಷಹಾವಲಿ ದರ್ಗಾದ 799ನೇ ಜಾತ್ರಾ ಮಹೋತ್ಸವ (ಉರುಸ್) ಗಂಧದ (ಸಂದಲ್) ಮೆರವಣಿಗೆಯು ಭಕ್ತಸಮೂಹ ನಡುವೆ ಶನಿವಾರ ರಾತ್ರಿ ಬಹು ವಿಜೃಂಭಣೆಯಿಂದ ಜರುಗಿತು.
ಶನಿವಾರ ಬೆಳಗ್ಗೆ ಹಿಂದು ಭಕ್ತ ನಾಗಣ್ಣ ಮಾಸ್ಟರ್ ಬಳ್ಳಾ ಅವರ ಮನೆಯಲ್ಲಿ ಸಾಮೂಹಿಕ ಪಾರ್ಥನೆ (ಫಾತೆಹಾ) ಜರುಗಿತು. ವಿಶೇಷ ಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ರಾತ್ರಿ 10ಕ್ಕೆ ಬಳ್ಳಾ ಮನೆಯಿಂದ ಗಲಾಫ್ ಮೆರವಣಿಗೆಯು ಮುತ್ತುವಲ್ಲಿ ಸೈಯದ್ ಮಿನಾಜುದ್ದೀನ್ ಚಿಸ್ತಿ ಮನೆಗೆ ತಲುಪಿತು. ಅಲ್ಲಿ ವಿಶೇಷ ಪಾರ್ಥನೆ ಸಲ್ಲಿಸಿ ಮೌಲ್ವಿಗಳಿಂದ ಗಂಧಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ 11 ಗಂಟೆಗೆ ಚಿಸ್ತಿ ಮನೆಯಿಂದ ಪ್ರಾರಂಭವಾದ ಗಂಧದ ಮೆರವಣಿಗೆಯು ತಳಗೇರಿ, ಭುವನೇಶ್ವರಿ ವೃತ್ತ, ಜನತಾ ವೃತ್ತ, ಕಿರಾಣಾ ಬಜಾರ್, ಕಪಡಾ ಬಜಾರ್, ಚಿತ್ತಾವಲಿ ವೃತ್ತದ ಮೂಲಕ ಬೆಳಗ್ಗೆ 5 ಗಂಟೆಗೆ ಚಿತ್ತಾಷಹಾವಲಿ ದರ್ಗಾಕ್ಕೆ ತಲುಪಿತು. ದರ್ಗಾದ ಸಮಾಧಿಗೆ ಗಂಧದ ಲೇಪನ ಮಾಡಲಾಯಿತು. ನಂತರ ತಬರುಕ್ ವಿತರಿಸಲಾಯಿತು. ಗಂಧದ ಮೆರವಣಿಗೆಯಲ್ಲಿ ಎರಡು ಒಂಟೆಗಳು, ಕುದುರೆ, ಯುವಕರ ಕಟ್ಟಿಗೆ ಆಟ, ಭಕ್ತಿ ಪ್ರಧಾನ ಹಾಡುಗಳು ಜನಮನ ಸೆಳೆದವು.
ಕತ್ತಲೆಯಲ್ಲಿ ಸಾಗಿದ ಮೆರವಣಿಗೆ, ಸಾರ್ವಜನಿಕರ ಆಕ್ರೋಶ:
ಪಟ್ಟಣದ ಐತಿಹಾಸಿಕ ಹಿಂದು-ಮುಸ್ಲಿಂ ಭಾವೈಕ್ಯತೆಯ ಸೂಫಿ ಸಂತ -ಹಜರತ್ ಚಿತ್ತಾಷಹಾವಲಿ ದರ್ಗಾದ 799ನೇ ಜಾತ್ರಾ ಮಹೋತ್ಸವ (ಉರುಸ್) ಗಂಧದ (ಸಂದಲ್) ಮೆರವಣಿಗೆಯು ಶನಿವಾರ ರಾತ್ರಿ ಕತ್ತಲೆಯ ನಡುವೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಅಲ್ಲೊಂದು ಇಲ್ಲೊಂದು ಟ್ಯೂಬ್ ಲೈಟ್ ಬೆಳಕು ಇರುವುದನ್ನು ಬಿಟ್ಟರೆ ಬಹುತೇಕ ಕತ್ತಲು ಆವರಿಸಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಸಂಬಂಧಪಟ್ಟ ಪುರಸಭೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಹಿಡಿ ಶಾಪ ಹಾಕಿದರು. ಉರುಸ್ ನಡೆಯುವ ವಿಷಯ ಮೊದಲೇ ತಿಳಿದಿದ್ದರೂ ಸಹ ಬೆಳಕಿನ ವ್ಯವಸ್ಥೆ ಮಾಡದೇ ಇರುವುದು ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತದೆ.
ಎಡಿಷನಲ್ ಎಸ್ಪಿ ಮಹೇಶ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಸಿಪಿಐ ಸಿದ್ದಬಸವನಗೌಡ ಪಾಟೀಲ, ಪಿಎಸ್ಐಗಳಾದ ಮಂಜುನಾಥರೆಡ್ಡಿ, ತಿರುಮಲೇಶ, ರೇಣುಕಾ, ಸಿದ್ದಲಿಂಗ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡರಾದ ರಾಜಶೇಖರ ಬಳ್ಳಾ, ನಾಗರೆಡ್ಡಿ ಗೋಪಸೇನ್, ಸುರೇಶ ಅಳೋಳ್ಳಿ, ಮಲ್ಲರೆಡ್ಡಿ ಗೋಪಸೇನ್, ಸೈಯದ್ ಸೇಠ್, ನಿಜಾಮೋದಿನ್ ಚಿಸ್ತಿ, ಮಹ್ಮದ ಇಬ್ರಾಹಿಂ, ಚಂದ್ರಶೇಖರ ಬಳ್ಳಾ, ರಾಜಣ್ಣ ಕರದಾಳ, ಚಂದ್ರಶೇಖರ ಕಡೆಸೂರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇದ್ದರು.

