ಭಂಕೂರ ಬಸವ ಪ್ರವಚನ ಕಾರ್ಯಕ್ರಮ | ವಿಶ್ವದಲ್ಲೇ ಸಾಮಾಜಿಕ – ಧಾರ್ಮಿಕ ಕ್ರಾಂತಿ ನಡೆಸಿದವರು ಬಸವಾದಿ ಶರಣರು: ಸತ್ಯಂಪೇಟೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ದೇವರ ಹೆಸರಿನಲ್ಲಿ ಜನ ಸಾಮಾನ್ಯರಿಗೆ ಮೌಢ್ಯವನ್ನು ಬಿತ್ತಿದ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ವಿಶ್ವದಲ್ಲೇ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ ನಡೆಸಿದವರಲ್ಲಿ ಬಸವಾದಿ ಶರಣರೇ ಮೊದಲಿಗರು ಎಂದು ಹಿರಿಯ ಪತ್ರಕರ್ತ, ಸಾಹಿತಿ ಡಾ.ಶಿವರಂಜನ ಸತ್ಯಂಪೇಟೆ ಹೇಳಿದರು.
ತಾಲೂಕಿನ ಭಂಕೂರ ಗ್ರಾಮದ ಶಾಂತ ನಗರದ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ನಿಮಿತ್ತ ಆಯೋಜಿಸಲಾದ ಬಸವ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡವ, ದೀನ ದಲಿತರಿಗೆ ದೇವರ ಗುಡಿಯಲ್ಲಿ ಪ್ರವೇಶ ಇರದ ಸಂದರ್ಭದಲ್ಲಿ ಅವರಿಗೆ ದೇಹವೇ ದೇವಾಲಯ ಪರಿಕಲ್ಪನೆ ಕೊಟ್ಟು ದೇವಾಲಯಕ್ಕೆ ಹೋಗುವ ಅಗತ್ಯವಿಲ್ಲ. ಅವರಿಗೆ ಕೈಯಲ್ಲಿ ಅರಿವಿನ ಕುರುಹಾದ ಇಷ್ಟಲಿಂಗವನ್ನು ಕೊಟ್ಟವರು ಬಸವಣ್ಣನವರು, ಆದ್ದರಿಂದ ಬಸವಣ್ಣವರನ್ನು ಇಷ್ಟಲಿಂಗದ ಜನಕ ಎಂದು ಕರೆಯುತ್ತಾರೆ ಎಂದರು.
ನಮ್ಮ ದೇಶದ ಸಂವಿಧಾನವನ್ನು ಡಾ.ಬಿಆರ್.ಅಂಬೇಡ್ಕರ ರವರು ಬರೆದರೇ, ಜಗತ್ತಿನ ಸಂವಿಧಾನವನ್ನು ಬರೆದವರು ಬಸವಣ್ಣನವರು, ಆದ್ದರಿಂದ ವಿಶ್ವಗುರು ಎಂದು ಕರೆಯಿಸಿಕೊಳ್ಳುತ್ತಾರೆ ಎಂದರು.
ಪ್ರವನಕಾರರಾದ ಬೆಳಗಾಂವ ಜನವಾಡದ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಸಾಮಾಜಿಕ ಅನಿಷ್ಠ ಆಚರಣೆಗಳು, ಜನರ ಮೇಲೆ ನಡೆಯುವ ಶೋಷಣೆಗಳನ್ನು ಕಂಡು ಅದರ ವಿರುದ್ಧ ಸಮಾಜೋಧಾರ್ಮಿಕ ಕ್ರಾಂತಿ ನಡೆಸಿದವರು ಬಸವಣ್ಣವರು, ಜಾತಿರಹಿತ ಸಮಾಜದ ಪರಿಕಲ್ಪನೆ, ಸಮಸಮಾಜವನ್ನು ನಿರ್ಮಾಣ ಮಾಡುವ ಕನಸು ಅವರದಾಗಿತ್ತು, ಅವರ ವಚಗಳನ್ನು ಪಚನ ಮಾಡಿದರೆ ಲೋಕದಲ್ಲಿ ಶಾಂತಿ ಸುವ್ಯವಸ್ಥಿತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಅತಿಥಿಗಳಾಗಿ ಅನೀಲ ಜಗನ್ನಾಥ ಕಲ್ಯಾಣಿ, ಬಸವ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ ಮುಸ್ತಾರಿ ಮಾತನಾಡಿದರು. ಭಂಕೂರ ಗ್ರಾಮದ ಗಣ್ಯರಾದ ಬಸವಂತರಾಯ ದಳಪತಿ ವೇದಿಕೆಯ ಮೇಲಿದ್ದರು. ಈ ಸಂದರ್ಭದಲ್ಲಿ ಬಸವ ಸಮಿತಿ ಸರ್ವ ಪದಾಧಿಕಾರಿಗಳು ಹಾಗೂ ಭಂಕೂರಿನ ಗ್ರಾಮಸ್ಥರು ಹಾಜರಿದ್ದರು.
ಬಸವ ಸಮಿತಿ ಕಾರ್ಯದರ್ಶಿ ಸಿದ್ದರಾಮ ಕೊರಪಳ್ಳಿ ನಿರೂಪಿಸಿದರು, ಶರಣಬಸಪ್ಪ ನಾಗನಹಳ್ಳಿ ಸ್ವಾಗತಿಸಿದರು, ಅಮರಪ್ಪ ಹೀರಾಳ ವಂದಿಸಿದರು.
ಶಹಾಬಾದ ಸುದ್ದಿ- ನಾಗರಾಜ್ ದಂಡಾವತಿ

