ಡಿ. 9 ರಂದು ಭೀಮನಹಳ್ಳಿ ನೂತನ ಮಂದಿರ ಉದ್ಘಾಟನೆ | ಡಾ.ಸಿದ್ಧತೋಟೇಂದ್ರ ಶ್ರೀ ಗುರುವಂದನೆ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನಾಲವಾರದ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಗುರುವಂದನಾ ಹಾಗೂ ರಜತ್ ಕಿರೀಟ ಸಮರ್ಪಣಾ ಸಮಾರಂಭ ಡಿ.9 ರಂದು ಅದ್ಧೂರಿಯಾಗಿ ನಡೆಯಲಿದೆ. ಎಂದು ಶಿವಲಿಂಗ ಕೊಳ್ಳಿ ಭೀಮನಹಳ್ಳಿ ತಿಳಿಸಿದ್ದಾರೆ.
ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹಯ್ಯಾಳಲಿಂಗ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದ ಸಾನಿಧ್ಯ ವಹಿಸಲಿರುವ ಶ್ರೀ ಕ್ಷೇತ್ರ ನಾಲವಾರ ಪೂಜ್ಯರಿಗೆ ಸಕಲ ಸದ್ಭಕ್ತರಿಂದ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ಮಂಗಳವಾರ ಮಧ್ಯಾಹ್ನ 03 ಗಂಟೆಗೆ ಭೀಮನಹಳ್ಳಿ ಪುರಪ್ರವೇಶ ಮಾಡಲಿರುವ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳನ್ನು ಸಾರೋಟಿನಲ್ಲಿ ಭವ್ಯ ಮೆರವಣಿಗೆಯ ಮೂಲಕ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಸದ್ಭಕ್ತರು ಬರಮಾಡಿಕೊಳ್ಳಲಿದ್ದಾರೆ. ಈ ಉತ್ಸವದಲ್ಲಿ ಡೊಳ್ಳು, ಹಲೆಗೆ, ಬಾಜಿ ಭಜಂತ್ರಿ, ಪೂರ್ಣ ಕುಂಭ ಕಳಸಗಳೊಂದಿಗೆ ಭವ್ಯವಾಗಿ ನೆರವೇರಲಿದೆ.
ನಂತರ ನಡೆಯುವ ಗುರುವಂದನಾ ಸಮಾರಂಭದಲ್ಲಿ ಪೂಜ್ಯರಿಗೆ ರಜತ್ ಕಿರೀಟ ಸಮರ್ಪಣೆ ಮತ್ತು ನಾಣ್ಯಗಳಿಂದ ತುಲಾಭಾರ ನಡೆಯಲಿದೆ. ಈ ಸಮಾರಂಭದಲ್ಲಿ ವಿವಿಧ ಮಠಾಧೀಶರು, ಸಾಹಿತಿಗಳು, ಕವಿ ಕಲಾವಿದರು, ರಾಜಕೀಯ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

