ಬಿಗಿ ಪೊಲೀಸ್ ಬಂದೋಬಸ್ತ್, 52 ಕಡೆ ಸಿಸಿ ಕ್ಯಾಮೆರಾ ಅಳವಡಿಕೆ | ಚಿತ್ತಾಪುರ ಆರ್.ಎಸ್.ಎಸ್ ಪಥಸಂಚಲನಕ್ಕೆ ಸಕಲ ಸಿದ್ಧತೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆರ್.ಎಸ್.ಎಸ್ ಪಥಸಂಚಲನಕ್ಕೆ ಹೈಕೋರ್ಟ್ ನವೆಂಬರ್ 16 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರವರೆಗೆ ಪಥಸಂಚಲನ ಹಾಗೂ ಕಾರ್ಯಕ್ರಮಕ್ಕೆ ಕೆಲವು ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಿದ ಪ್ರಯುಕ್ತ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಿಪಿಐ ಚಂದ್ರಶೇಖರ ತಿಗಡಿ ತಿಳಿಸಿದ್ದಾರೆ.
ನಾಗಾವಿ ಎಕ್ಸಪ್ರೆಸ್ ನೊಂದಿಗೆ ಮಾತನಾಡಿದ ಅವರು, ಪಥಸಂಚಲನ ಸರಾಗವಾಗಿ ಹಾಗೂ ಶಾಂತಿ ಸುವ್ಯವಸ್ಥೆಯಿಂದ ನಡೆಯಲು ಪಟ್ಟಣದಾದ್ಯಂತ 52 ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ, ಡಿವೈಎಸ್ಪಿ 8, ಸಿಪಿಐ 15, ಪಿಎಸ್ಐ 40, ಪಿಸಿ 650, ಕೆ.ಎಸ್.ಆರ್.ಪಿ 6, ಡಿಆರ್ 5 ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಶುಕ್ರವಾರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಲಾಗಿದೆ ಹಾಗೂ ಶನಿವಾರ ಸಂಜೆ ಪೊಲೀಸ್ ರೂಟ್ ಮಾರ್ಚ್ ಮಾಡಲಾಗಿದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪಥಸಂಚಲನ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಗರಿಷ್ಠ 300 ಜನರಿಗೆ ಸಿಮಿತಗೊಳಿಸಲಾಗಿದೆ ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ವಯಂ ಸೇವಕರು ಚಿತ್ತಾಪುರ ಕಂದಾಯ ತಾಲೂಕಿನವರಾಗಿರಬೇಕು, ಪಥಸಂಚಲನ ಹಾಗೂ ಕಾರ್ಯಕ್ರಮದಲ್ಲಿ 50 ಜನರಿಗೆ ಮಾತ್ರ ಬ್ಯಾಂಡ್ ನೊಂದಿಗೆ ಹಾಜರಾಗಲು ಅವಕಾಶವಿದೆ.
ಪಥಸಂಚಲನ ಮಾರ್ಗ :
ಪಥಸಂಚಲನ ಹಾಗೂ ಕಾರ್ಯಕ್ರಮವನ್ನು ನವೆಂಬರ್ 16 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರ ನಡುವೆ ನಡೆಸಿ ಪೂರ್ಣಗೊಳಿಸಬೇಕು. ಮಾರ್ಗಗಳಾದ ಬಜಾಜ್ ಕಲ್ಯಾಣ ಮಂಟಪ, ಬಸ್ ನಿಲ್ದಾಣ, ಅಂಬೇಡ್ಕರ ವೃತ್ತ, ಸರ್ಕಾರಿ ಗ್ರಂಥಾಲಯ, ಬಸವ ಆಸ್ಪತ್ರೆ, ರಾಘವೇಂದ್ರ ಖಾನಾವಳಿ, ಕಾಶಿ ಗಲ್ಲಿಯ ಗಣೇಶ ಮಂದಿರ, ಕೆನರಾ ಬ್ಯಾಂಕ, ತಾಲೂಕು ಪಂಚಾಯತ ಕಾರ್ಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರ ವೃತ್ತದಿಂದ ಮರಳಿ ಬಜಾಜ್ ಕಲ್ಯಾಣ ಮಂಟಪ ಈ ಮಾರ್ಗದಲ್ಲಿಯೇ ಪಥ ಸಂಚಲನ ಕೈಗೊಳ್ಳುವುದು.

