ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ | ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿ ವಿಕ್ರಮ್ ಹೇಳಿದರು.
ಪಟ್ಟಣದ ಕಾಶಿ ಗಲ್ಲಿಯ ಸಮುದಾಯ ಭವನದಲ್ಲಿ ಕರ್ನಾಟಕ ಚಾಲಕರ ಒಕ್ಕೂಟ ತಾಲೂಕು ಘಟಕ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಚಾಲಕರ ಅಸಂಘಟಿತ ಕಾರ್ಮಿಕ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಸೌಲಭ್ಯಗಳನ್ನು ಪಡೆಯಲು 50 ಶುಲ್ಕದೊಂದಿಗೆ ನೋಂದಣಿ ಮಾಡಿಸಿ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಪಘಾತ ಪರಿಹಾರ ಸೌಲಭ್ಯಗಳಾದ ಅಪಘಾತದಿಂದ ಫಲಾನುಭವಿಗಳು ನಿಧನರಾದಲ್ಲಿ, ನಾಮನಿರ್ದೇತಿತರಿಗೆ ರೂ.5 ಲಕ್ಷ ಪರಿಹಾರ, ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಾಗ, ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ರೂ.2 ಲಕ್ಷದ ವರೆಗೆ ಪರಿಹಾರ, ಅಪಘಾತದಿಂದ ತಾತ್ಕಾಲಿಕ ದುರ್ಬಲತೆ ಹೊಂದಿದಾಗ-ಅಪಘಾತಕೊಳ್ಳಗಾಗಿ ಆಸ್ಪತ್ರೆಯಲ್ಲಿ 15 ದಿನಗಳಿಗಿಂತ ಕಡಿಮೆ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಠ ರೂ. 50,000 ರವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ, ಇವುಗಳಲ್ಲಿ ಯಾವುದು ಕಡಿಮೆಯೋ ಅದು ಹಾಗೂ 15 ದಿನಗಳಿಗಿಂತ ಹೆಚ್ಚು ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಠ ರೂ. 1 ಲಕ್ಷದ ವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ. ಇವುಗಳಲ್ಲಿ ಯಾವುದು ಕಡಿಮೆಯೊ ಅದರ ಮರುಪಾವತಿ, ನೈಸರ್ಗಿಕ ಮರಣ ಪರಿಹಾರ ಹಾಗೂ ಅಂತ್ಯಸಂಸ್ಕಾರ ವೆಚ್ಚ: ಸಹಜ ಮರಣ ಹೊಂದಿದ ಫಲಾನುಭವಿಗಳ ಅವಲಂಬಿತರಿಗೆ ಅಂತ್ಯ ಸಂಸ್ಕಾರದ ವೆಚ್ಚವೂ ಸೇರಿದಂತೆ ರೂ.25,000 ಗಳ ಪರಿಹಾರ, ಶೈಕ್ಷಣಿಕ ಧನಸಹಾಯ: ನೋಂದಾಯಿತ ಫಲಾನುಭವಿಯ ಗರಿಷ್ಠ ಇಬ್ಬರು ಮಕ್ಕಳಿಗೆ: 12ನೇ ತರಗತಿ ಅಥವಾ ತತ್ತಮಾನ – ವಾರ್ಷಿಕ ತಲಾ ರೂ.3,000, ಪದವಿ ಅಥವಾ ತತ್ಸಮಾನ ವಾರ್ಷಿಕ ತಲಾ ರೂ.5,500, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ – ವಾರ್ಷಿಕ ತಲಾ ರೂ.8,000, ಸ್ನಾತಕೋತ್ತರ ಪದವಿ – ವಾರ್ಷಿಕ ತಲಾ ರೂ.11,000, ಅಪಘಾತದಿಂದ ನಿಧನರಾದ / ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಯ ಗರಿಷ್ಠ ಇಬ್ಬರು ಮಕ್ಕಳಿಗೆ: 1ನೇ ತರಗತಿಯಿಂದ ಪದವಿ ಅಥವಾ ತತ್ಸಮಾನ – ವಾರ್ಷಿಕ ತಲಾ ರೂ.10,000, ಇಂಜಿನಿಯರಿಂಗ್ ಹಾಗೂ ವೈದ್ಯ’ಯ ಶಿಕ್ಷಣ – ವಾರ್ಷಿಕ ತಲಾ ರೂ.20,000, ಸ್ನಾತಕೋತ್ತರ ಪದವಿ – ವಾರ್ಷಿಕ ತಲಾ ರೂ.25,000, ಹೆರಿಗೆ ಭತ್ಯೆ: ಫಲಾನುಭವಿಯ ಮೊದಲ ಎರಡು ಹೆರಿಗೆಗಳಿಗೆ ಮಾತ್ರ ಸೀಮಿತಗೊಂಡಂತೆ ತಲಾ ರೂ.10,000 ಸೌಲಭ್ಯಗಳಿವೆ ಎಂದು ಮಾಹಿತಿ ನೀಡಿದರು.
ಚಾಲಕರ ಒಕ್ಕೂಟ ತಾಲೂಕು ಅಧ್ಯಕ್ಷ ಜಗನ್ನಾಥ ಕಾಶಿ ಮಾತನಾಡಿ, ಚಾಲಕರ ಪರ ರಾಜ್ಯದಲ್ಲಿ ಒಂದು ಸಂಘಟನೆ ಜನ್ಮ ತಾಳಿದ್ದು ದಿನೇ ದಿನೇ ಸಂಘಟನೆ ಬಲಿಷ್ಠವಾಗುತ್ತಿದೆ ಹೀಗಾಗಿ ಎಲ್ಲ ಚಾಲಕರು ಸಂಘದ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಸಂಘಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಕರೆ ನೀಡಿದರು. ಎಲ್ಲರೂ ತಪ್ಪದೇ ಕಾರ್ಮಿಕ ಇಲಾಖೆಯ ಕಾರ್ಡ್ ಮಾಡಿಸಿಕೊಳ್ಳಬೇಕು ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಎಎಸ್ಐ ಬಾಬುರಾವ್, ಒಕ್ಕೂಟದ ಜಿಲ್ಲಾಧ್ಯಕ್ಷ ರುಕ್ಮಣ್ ರೆಡ್ಡಿ, ಚಂದ್ರಕಾಂತ ಅವರು ಮಾತನಾಡಿದರು. ಕಾರ್ಮಿಕ ಇಲಾಖೆಯ ಅಕ್ಷಯ್ ಮೊರೆ, ಸುರೇಶ್, ಶಶಿಧರ, ಬಾಬುರಾವ್ ಶಹಾಬಾದ್, ತಮ್ಮಣ್ಣ ಸುನಾರ್, ರವಿಚಂದ್ರ ದೊಡ್ಡಮನಿ, ಮಹೇಶ್ ರಾವೂರ, ಸಾಗರ ಚಿಟ್ಟೇಕಾರ, ಬಸವರಾಜ ಬಂಡಿ, ಸೋಮಶೇಖರ್ ಮಾಡಿಗಿ, ಭೀಮಾಶಾ ದಂಡಗುಂಡ, ಬಬ್ಲು ಸೇಟ್, ರಾಮಚಂದ್ರ ಪಂಚಾಳ್, ಮಹೇಶ್ ದೊಡ್ಡಮನಿ, ಉಮೇಶ್ ಗೊಂದಳಿ, ಕುಮಾರ್ ಮೊಗಲಾ, ಶಿವಕುಮಾರ್ ಮುಡಬೂಳ, ಮಲ್ಲಿಕಾರ್ಜುನ್ ಮಾಡಿಗಿ ಲಕ್ಷ್ಮಣ ಭೋವಿ, ಬಾಬು ಕಾಶಿ ಸೇರಿದಂತೆ ಇತರರು ಇದ್ದರು. ಶಿವುಕುಮಾರ ಆಂದೋಲಾ ನಿರೂಪಿಸಿದರು.

