ತಾಲೂಕ ಮಟ್ಟದ ಅಧಿಕಾರಿಗಳ ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ | ಬಿದಿ ನಾಯಿಗಳ ಮತ್ತು ದನಗಳ ಹಾವಳಿ ತಡೆಗಟ್ಟುವ ಸುಪ್ರೀಂ ಕೋರ್ಟ್ ಆದೇಶ ಪಾಲಿಸಿ: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಿದಿ ನಾಯಿಗಳ ಮತ್ತು ದನಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಆದೇಶಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಸೂಚಿಸಿದರು.
ಪಟ್ಟಣದ ಪ್ರಜಾಸೌಧ ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕ ಮಟ್ಟದ ಅಧಿಕಾರಿಗಳ ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ ಜಾನುವಾರುಗಳನ್ನು ಪುರಸಭೆ ಚಿತ್ತಾಪುರ ಮತ್ತು ಪಶು ಪಾಲನಾ ಇಲಾಖೆ ಜಂಟಿಯಾಗಿ ನಿಯಮಾನುಸಾರ ಗೋಶಾಲೆಗಳಿಗೆ ಸ್ಥಳಾಂತರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಬಿಡಾಡಿ ದನಗಳನ್ನು ತಕ್ಷಣವೆ ಗೋಶಾಲೆಗೆ ಸ್ಥಳಾಂತರಿಸಲು ನಿರ್ಣಯಿಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ ಮಾತನಾಡಿ, ಗ್ರಾಮೀಣ ಬಾಗದ ಬಿಡಾಡಿ ನಾಯಿ ಮತ್ತು ದನಗಳ ಹಾವಳಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಪಾಲಿಸಲು ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಸೂಚಿಸಿದರು.
ಚಿತ್ತಾಪುರ ಪುರಸಭೆ ವ್ಯಾಪ್ತಿಯ ಜಾನುವಾರು ಮಾಲೀಕರು ತಾವು ಸಾಕಿರುವ ಜಾನುವಾರುಗಳಿಗೆ (ದನ ಮತ್ತು ಎಮ್ಮೆ) ಪಶು ಪಾಲನಾ ಇಲಾಖೆ ಚಿತ್ತಾಪುರ ಸಂಪರ್ಕಿಸಿ ಕಿವಿ ಒಲೆ ಹಾಕಿಸಬೇಕು. ಸಾಕಿರುವ ಜಾನುವಾರುಗಳು ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರು ಮಾಲೀಕರು/ಕಾಯುವವರು ಇಲ್ಲದೆ ಬಿಡಬಾರದು. ಮಾಲೀಕರಿಲ್ಲದ ಜಾನುವಾರುಗಳು ಬೀದಿಯಲ್ಲಿ ಕಂಡುಬಂದಲ್ಲಿ ಬಿಡಾಡಿ ದನ ಎಂದು ಪರಿಗಣಿಸಿ ನವೆಂಬರ್ 21 ರಿಂದ ಗೋಶಾಲೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಪಶು ವೈದ್ಯಾಧಿಕಾರಿ ಡಾ.ಶಂಕರ ಕಣ್ಣಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

