ಗುರುಮಠಕಲ್ ಭಾವಸಾರ ಕ್ಷತ್ರಿಯ ಸಮಾಜ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ, ಯೋಗಾಭ್ಯಾಸದಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿ: ಸತೀಶ್ ಢಗೆ
ನಾಗಾವಿ ಎಕ್ಸಪ್ರೆಸ್
ಗುರುಮಠಕಲ್: ಯೋಗವೆಂದರೆ ದೇಹದ ಅಂಗಾಗಗಳ ಮೇಲಿನ ಸಂಪೂರ್ಣ ಗಮನದೊಂದಿಗೆ ಮಾಡುವ ವ್ಯಾಯಾಮ, ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಭಾವಸಾರ ಕ್ಷತ್ರಿಯ ಯುವ ಮುಖಂಡ ಸತೀಶ್ ಢಗೆ ಹೇಳಿದರು.
ಪಟ್ಟಣದ ನಾನಪೂರ ಬಡಾವಣೆ ಕೃಷ್ಣ ಜೀ ಅಣ್ಣೆ ಅವರ ಮನೆಯಲ್ಲಿ ಭಾವಸಾರ ಕ್ಷತ್ರಿಯ ಸಮಾಜ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ನಮ್ಮ ಮನ ಮತ್ತು ದೇಹದ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಕನಿಷ್ಟ ನಮ್ಮ ಆರೋಗ್ಯಕ್ಕೆ ಪೂರಕ ಕೆಲ ಯೋಗಾಸನಗಳ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ದೇಶವು ಉತ್ತಮವಾಗಿರಲು ನಮ್ಮೆಲ್ಲರ ಆರೋಗ್ಯವೂ ಉತ್ತಮವಾಗಿರಬೇಕಿದೆ. ಊಟ ಮಾಡುವ ಅಭ್ಯಾಸ, ಜೀವನ ಶೈಲಿಯಲ್ಲಿನ ಅಲ್ಪ ಬದಲಾವಣೆಯೂ ನಮ್ಮಲ್ಲಿನ ಹಲವು ಸಮಸ್ಯೆಗಳನ್ನು ನಿವಾರಿಸಲಿದೆ. ಬೆಳಗ್ಗೆ ಬೇಗ ಮೇಲೆದ್ದು ಎರಡು ಲೋಟ ಬಿಸಿ ನೀರು ಸೇವಿಸಿದರೆ ದೇಹದಲ್ಲಿನ ಮಲವು ಸಂಪೂರ್ಣ ಸ್ವಚ್ಛಗೊಳ್ಳುತ್ತದೆ. ನಿಯಮಿತ ಯೊಗಾಭ್ಯಾಸದಿಂದ ಚೈತನ್ಯ ಲಭಿಸುತ್ತದೆ. ಊಟ ಮಾಡುವಾಗ ನಮ್ಮ ದೇಹಕ್ಕೆ ಅವಶ್ಯಕವಾದ ಆಹಾರವನ್ನು ಸೇವಿಸಬೇಕು ಎಂದು ಹೇಳಿದರು.
ಭಾವಸಾರ ಕ್ಷತ್ರಿಯ ಯೋಗ ಶಿಕ್ಷಕಿ ಸುನೀತಾ ದತ್ತು ಬೋಡಕೆ ಮಾತನಾಡಿ, ಜೀವನದಲ್ಲಿ ದೇಹದ ಆರೋಗ್ಯ ಮತ್ತು ಸದೃಢತೆ ಮುಖ್ಯ. ನಾವು ಆರೋಗ್ಯವಂತರಾಗಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನಾವು ಔಷಧಿಗಳ ವಿಚಾರದಲ್ಲಿ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ನಮ್ಮ ರೋಗ ನಿರೋಧಕ ಶಕ್ತಿ ಗಟ್ಟಿಯಾಗಿದ್ದರೆ ಎಲ್ಲಾ ತರಹದ ಸಮಸ್ಯೆಗಳನ್ನು ಎದುರಿಸಬಹುದು. ಹೀಗಾಗಿ ನಾವು ದಿನಾಲೂ ಯೋಗ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಹಿರಿಯ ಮುಖಂಡ ಕೃಷ್ಣಾ ಜೀ ಅಣ್ಣೆ, ಸಂತೋಷ ಢಗೆ, ಪ್ರವೀಣ್ ಅಣ್ಣೆ, ನಾಗರಾಜ್ ಪತಂಗೆ, ಗಾಯತ್ರಿ ಢಗೆ, ಶ್ರೀ ಲತಾ ಅಣ್ಣೆ, ಗೀತಾ, ಪೂಜಾ, ತಾರಬಾಯಿ ಅಣ್ಣೆ, ಓಂ ಗಾಡಳೆ, ಮಹಾದೇವ ಸೇಡಂಕರ್ ಸೇರಿದಂತೆ ಇತರರು ಇದ್ದರು.

