ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂರು ಖೈದಿಗಳು ತಪ್ಪಿಸಿಕೊಂಡ ಪ್ರಕರಣ | ಜೈಲಾಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತು: ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕೇಂದ್ರ ಕಾರಾಗೃಹದಿಂದ ಮೂರು ಖೈದಿಗಳು ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪಕ್ಕೆ ಸಂಬಂಧಿಸಿದ ಜೈಲಾಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಹಾಗೂ ತಪ್ಪಿಸಿಕೊಂಡ ಖೈದಿಗಳನ್ನು ಸೆರೆಗಾಗಿ ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು, ಪರಿಣಾಮವಾಗಿ ಓರ್ವ ಖೈದಿಯನ್ನು ಸೆರೆ ಹಿಡಿಯಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಾನು ಗೃಹ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಗೃಹ ಇಲಾಖೆಯ ಪ್ರತಿ ವಿಭಾಗಗಳ ಪರಿಶೀಲನಾ ಸಭೆ ನಡೆಸಿ, ಆ ಎಲ್ಲಾ ವಿಭಾಗಗಳ ಬಲವರ್ಧನೆಗೆ, ಉನ್ನತಿಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಾರಾಗೃಹಗಳ ಸ್ಥಿತಿಗತಿಗಳ ಪರಿಶೀಲನೆ ಮತ್ತು ಬಂಧಿಖಾನೆ ಸಿಬ್ಬಂದಿಗಳ ಕಾರ್ಯಕ್ಷಮತೆಯ ಪರಿಶೀಲನೆ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.
ಜೈಲುಗಳ ಸುಧಾರಣೆ, ಭದ್ರತಾ ವ್ಯವಸ್ಥೆಯ ಉನ್ನತಿಕರಣ ಮತ್ತು ಅಕ್ರಮಗಳಿಗೆ ಕಡಿವಾಣದಂತಹ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಟೀಕೆಗಳಿಗೆ ಬಾಯ್ತೆರೆದು ಕುಳಿತಿರುವ ಬಿಜೆಪಿ ನಾಯಕರು ಒಮ್ಮೆ ತಮ್ಮ ಅವಧಿಯಲ್ಲಿ ರಾಜ್ಯದ ಜೈಲುಗಳ ಸ್ಥಿತಿ ಹೇಗಿತ್ತು ಎಂಬುದನ್ನು ಅವಲೋಕನ ಮಾಡಿಕೊಂಡರೆ ಒಳಿತು.
2010 ರಲ್ಲಿ ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ 8 ಖೈದಿಗಳು ಪರಾರಿಯಾಗಿದ್ದರು. ರಾಜ್ಯದ ಇತಿಹಾಸದಲ್ಲೇ ಇದು ದೊಡ್ಡ ಪ್ರಕರಣ ಎಂದು ಪರಿಗಣಿಸಬಹುದು. ಇದು ಅಂದಿನ ಗೃಹಸಚಿವರ ವೈಫಲ್ಯವೆಂದು ಬಿಜೆಪಿ ಹೇಳುತ್ತದೆಯೇ?
ಬಿಜೆಪಿ ಅವಧಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಅತಿಥಿ ಗೃಹವಾಗಿ ಬದಲಾಗಿ ಖೈದಿಗಳಿಗೆ ಸಕಲ ಸವಲತ್ತುಗಳು ದೊರಕುತ್ತಿದ್ದ ಸುದ್ದಿಗಳನ್ನು ರಾಜ್ಯ ನೋಡಿದೆ. ಇದು ಬಿಜೆಪಿ ಸರ್ಕಾರದ ವೈಫಲ್ಯ ಎಂಬುದನ್ನು ಒಪ್ಪಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

