ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಮುಖಂಡನಿಂದ ನಾಗಾವಿ ಗೋಶಾಲೆಗೆ ಮೇವು ಸಲುವಾಗಿ 25 ಸಾವಿರ ದೇಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪುರಸಭೆ ಮಾಜಿ ಸದಸ್ಯ, ಉದ್ಯಮಿ ಮತ್ತು ಮುಸ್ಲಿಂ ಸಮಾಜದ ಮುಖಂಡ ಸೈಯದ್ ಜಫರ್ ಉಲ್ ಹಸನ್ ಅವರು ಬಕ್ರೀದ್ ಹಬ್ಬದ ಪ್ರಯುಕ್ತ ಪಟ್ಟಣದ ನಾಗಾವಿ ಗೋಶಾಲೆಗೆ ಮೇವು ಸಲುವಾಗಿ ಸ್ವಯಂಪ್ರೇರಿತವಾಗಿ 25 ಸಾವಿರ ಆರ್ಥಿಕ ದೇಣಿಗೆ ನೀಡುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದಿದ್ದಾರೆ.
ಇಂತಹ ನಿದರ್ಶನಗಳು ಪರಸ್ಪರ ಧರ್ಮಗಳ ನಡುವೆ ಬಾಂಧವ್ಯವನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತವೆ ಹಾಗೂ ನಮ್ಮ ದೇಶದ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಪರಿಕಲ್ಪನೆಯನ್ನು ಬಿಂಬಿಸುತ್ತವೆ.
ಸೈಯದ್ ಜಫರ್ ಉಲ್ ಹಸನ್ ಅವರು ತಮ್ಮ ತಂದೆ ತಾಯಿ ಹಾಗೂ ಸಹೋದರಿಯ ಸ್ಮರಣಾರ್ಥವಾಗಿ (ಸೈಯದ್ ಹಫೀಸ್ ಉಲ್ ಹಸನ್, ಸೈದಾ ಕೌಸರ್ ಹಫೀಸ್ ಮತ್ತು ಸೈದಾ ಷಮೀಮ್ ಬೇಗಮ್,) ಬಕ್ರೀದ್ ಹಬ್ಬದ ಪ್ರಯುಕ್ತ ಶ್ರೀ ನಾಗಾವಿ ಗೋಶಾಲೆಗೆ ತಮ್ಮ ಪುತ್ರನ ಸಹಿತ ಬಂದು 25 ಸಾವಿರ ನಗದು ಹಣ ದೇಣಿಗೆ ರೂಪದಲ್ಲಿ ನೀಡಿದರು.
ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಮುಖಂಡ ಗೋಶಾಲೆಗೆ 25 ಸಾವಿರ ದೇಣಿಗೆ ನೀಡಿದ್ದು ಮೆಚ್ಚುವಂಥದ್ದು, ಕಡಿಯುವ ಕೈಯಿಂದ ಕೊಡುವ ಕೆಲಸವಾಗಿದೆ ಇದು ಮುಸ್ಲಿಂ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಗೋಶಾಲೆ ವತಿಯಿಂದ ದಾನಿ ಸೈಯದ್ ಜಫರ್ ಉಲ್ ಹಸನ್ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗೋಶಾಲೆಯ ಅಧ್ಯಕ್ಷ ರಮೇಶ ಬೊಮ್ಮನಳ್ಳಿ, ಮಲ್ಲಿಕಾರ್ಜುನ್ ರೆಡ್ಡಿ ಇಜಾರ್, ಮಂಜುನಾಥ ಶಾಸ್ತ್ರಿ, ಧನರಾಜ ದೇಶಪಾಂಡೆ, ನಟರಾಜ್ ಶಿಲ್ಪಿ, ಲಕ್ಷ್ಮೀ ಮಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

