ಪೂಜ್ಯ ಶ್ರೀ ಡಾ.ಶರಣಬಸವಪ್ಪ ಅಪ್ಪ ಭಕ್ತಿಪೂರ್ವ ಶ್ರದ್ಧಾಂಜಲಿ | ಕಲ್ಯಾಣ ಕರ್ನಾಟಕ ಭಾಗಕ್ಕೆ ಅಪ್ಪ ಅವರ ಕೊಡುಗೆ ಅಪಾರ: ಭಂಕಲಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಹಾದಾಸೋಹಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಲ್ಯಾಣ ಕರ್ನಾಟಕ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪೂಜ್ಯ ಡಾ.ಶರಣಡಸವಪ್ಪ ಅಪ್ಪ ಅವರ ಭಕ್ತಿಪೂರ್ವ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕಲಬುರಗಿ ಶ್ರೀ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಎಂಟನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದ ಮಹಾನ್ ಶಿಕ್ಷಣ ಶಿಲ್ಪಿ ಆಗಿದ್ದಾರೆ ಎಂದು ಬಣ್ಣಿಸಿದರು.
ಕಲಬುರಗಿಯ ಭಾವೈಕ್ಯ ಪರಂಪರೆಯನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪೂಜ್ಯ ಡಾ.ಅಪ್ಪಾ ಅವರ ನಿಧನದಿಂದ ನಮ್ಮ ನಾಡು ಒಬ್ಬ ಶ್ರೇಷ್ಠ ಶಿಕ್ಷಣ ಪ್ರೇಮಿ, ಮಹಾದಾಸೋಹಿ, ಧಾರ್ಮಿಕ ಲೋಕದ ಪೂಜ್ಯರೊಬ್ಬರನ್ನು ಕಳೆದುಕೊಂಡು ಬಡವಾಗಿದೆ ಎಂದು ಸಂತಾಪ ಸೂಚಿಸಿದರು.
ಯುವ ಮುಖಂಡ ಅಂಬರೀಷ್ ಸುಲೇಗಾಂವ ಮಾತನಾಡಿ, ಡಾ.ಶರಣಬಸವಪ್ನ ಅಪ್ಪ ಅವರು ತ್ರಿವಿಧ ದಾಸೋಹದ ಮೂಲಕ ಈ ಭಾಗದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ ಅಲ್ಲದೇ ಕರೋನಾ ಸಮಯದಲ್ಲಿ ಆರ್ಥಿಕ ಸಹಾಯ ಮಾಡಿದ್ದಾರೆ ಹಾಗೂ ರಾಮಮಂದಿರ ನಿರ್ಮಾಣಕ್ಕೂ ಸಹ ದೇಣಿಗೆ ನೀಡಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಈ ಭಾಗದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದು ಸ್ಮರಿಸಿದರು. ಇವರ ಅಗಲಿಕೆಯಿಂದ ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ಸೂಚಿಸಿದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಅಶೋಕ ನಿಪ್ಪಾಣಿ, ಆನಂದ ಪಾಟೀಲ ನರಿಬೋಳ, ಶ್ರೀನಿವಾಸ ರೆಡ್ಡಿ ಪಾಲಪ್, ಗುರುಲಿಂಗಯ್ಯ ಸ್ವಾಮಿ, ಕೋಟೇಶ್ವರ ರೇಷ್ಮಿ, ಚಂದ್ರಶೇಖರ ಉಟಗೂರ, ಅನೀಲ ವಡ್ಡಡಗಿ, ನಾಗರೆಡ್ಡಿ ಗೋಪಸೇನ್, ಮಹೇಶ್ ಬೆಟಗೇರಿ, ಮಲ್ಲಿಕಾರ್ಜುನ ರೆಡ್ಡಿ ಆಜಾದ್, ಮಲ್ಲರೆಡ್ಡಿ ಗೋಪಸೇನ್, ಶಿವರಾಜ್ ಪಾಳೇದ್, ಸಂತೋಷ ಚೌದರಿ, ಬಸವಂತರಾವ್ ಮಾಲಿ ಪಾಟೀಲ, ಎಸ್.ಎನ್.ಪಾಟೀಲ, ವೀರಣ್ಣ ಸುಲ್ತಾನಪುರ, ಸುವನರೆಡ್ಡಿ, ಚಂದ್ರಶೇಖರ ಬಳ್ಳಾ, ವೀರಭದ್ರಪ್ಪ ಗುರುಮಠಕಲ್, ಬಸವರಾಜ ಹೂಗಾರ, ರವಿ ಗೊಬ್ಬುರ್, ಪ್ರಸಾದ್ ಅವಂಟಿ, ಶಾಂತಕುಮಾರ್ ಹತ್ತಿ, ಸಂಗಣ್ಣಗೌಡ ಸಂಕನೂರ, ರಾಚಣ್ಣ ಬೊಮ್ಮನಳ್ಳಿ, ಬಸವರಾಜ ಕಾಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿರೇಶ್ ಕರದಾಳ ನಿರೂಪಿಸಿದರು.

